ಬೆಂಗಳೂರು: ನಗರದಲ್ಲಿ ಇಂದು ನಡೆದ ತಿರಂಗ ಯಾತ್ರೆಯು ವೀರಸೇನಾನಿಗಳಿಗೆ ಧನ್ಯವಾದವನ್ನು ಸಲ್ಲಿಸಿತು.
ನಗರದ ಮಲ್ಲೇಶ್ವರ ಮಂತ್ರಿಮಾಲ್ನ ಸಂಪಿಗೆ ರಸ್ತೆಯ ಸಿರೂರು ಆಟದ ಮೈದಾನದಿಂದ ಮಲ್ಲೇಶ್ವರ 18ನೇ ಕ್ರಾಸ್ನವೆರೆಗೂ ನಡೆದ ಯಾತ್ರೆಯಲ್ಲಿ ನೂರಾರು ನಾಯಕರು, ಬೆಂಗಳೂರಿನ ನಾಗರೀಕರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಬೃಹತ್ ತ್ರಿವರ್ಣ ಧ್ವಜದಡಿ ಜನತೆ ಸೇರಿ ಸೇನಾ ಕಾರ್ಯಾಚರಣೆಗೆ ಬೆಂಬಲ ಸೂಚಿಸಿದರು.
ನಿವೃತ್ತ ಏರ್ ಮಾರ್ಷಲ್ ಎ.ವಿ. ಮುರುಳಿ ಅವರು ಮಾತನಾಡಿ, ಆಪರೇಷನ್ ಸಿಂದೂರ್ ಮುಗಿದಿಲ್ಲ. ಇನ್ನೊಮ್ಮೆ ನಡೆದರೆ ಪಾಕಿಸ್ತಾನ ನಿರ್ನಾಮವಾಗಲಿದೆ. ಪಿಒಕೆ ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂಬುದು ದೇಶದ ನಿಲುವಾಗಿತ್ತು. ಪ್ರಧಾನಿಯವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರು ಎಂದು ಮೆಚ್ಚುಗೆ ಸೂಚಿಸಿದರು. ಜನರು ಬಯಸಿದ್ದನ್ನು ನಾವು ಮಾಡಿ ತೋರಿಸಿದೆವು. ಸೈನಿಕರ ಹಿಂದೆ ಇಡೀ ರಾಷ್ಟ್ರ ನಿಂತಿತ್ತು ಎಂದರು. ಪಾಕಿಸ್ತಾನಕ್ಕೆ ಮಹಿಳೆಯರು ಸಮರ್ಥ ಉತ್ತರ ನೀಡಿದ್ದಾರೆ ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ರಾಜ್ಯಸಭಾ ಸದಸ್ಯ ಡಾ. ರಾಧಾಮೋಹನ್ ದಾಸ್ ಅಗ್ರವಾಲ್, ರಾಜ್ಯ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಸಂಸದ ಪಿ.ಸಿ. ಮೋಹನ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಎನ್. ಮುನಿರತ್ನ, ಎಸ್. ಮುನಿರಾಜು, ಮಾಜಿ ಸಂಸದ ಎಸ್. ಮುನಿಸ್ವಾಮಿ, ನಿವೃತ್ತ ಏರ್ ಮಾರ್ಷಲ್ ಎ.ವಿ. ಮುರುಳಿ, ಖ್ಯಾತ ವಕೀಲೆ ಶ್ರೀಮತಿ ಕ್ಷಮಾ ನರಗುಂದ, ಸ್ತ್ರೀ ಜಾಗೃತಿ ಪತ್ರಿಕೆಯ ಸಂಪಾದಕಿ ಶ್ರೀಮತಿ ಹೆಚ್.ಜಿ. ಶೋಭಾ, ಪಕ್ಷದ ಮುಖಂಡರು, ಕಾಲೇಜು ವಿದ್ಯಾರ್ಥಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಆಪರೇಷನ್ ಸಿಂದೂರ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತದ ಸೈನಿಕರಿಗೆ ಬೆಂಬಲ ಮತ್ತು ಧನ್ಯವಾದ ಸಲ್ಲಿಸುವ ಸಲುವಾಗಿ ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಅಡಿಯಲ್ಲಿ ಈ ಯಾತ್ರೆ ನೆರವೇರಿತು. ಮೊದಲಿಗೆ ಭಾರತ್ ಮಾತಾ ಕೀ ಜೈ, ಪಾಕಿಸ್ತಾನಕ್ಕೆ ಪಾಠಕಲಿಸಿದ ದೇಶ ಭಕ್ತ ಸೈನಿಕರಿಗೆ ಜೈ ಮತ್ತು ಭಾರತಕ್ಕೆ ವಿಶ್ವದಲ್ಲಿ ಗೌರವವನ್ನು ತಂದುಕೊಟ್ಟಿರುವ ವೀರಸೇನಾನಿಗಳಿಗೆ ಜೈ ಎಂಬ ಘೋಷವಾಕ್ಯಗಳನ್ನು ಕೂಗಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ವಕೀಲರಾದ ಶ್ರೀಮತಿ ಕ್ಷಮಾ ನರಗುಂದ ಅವರು, ಯಾವ ಹೆಣ್ಣುಮಕ್ಕಳ ಸಿಂದೂರವನ್ನು ಆಳಿಸಿದ್ದ ಭಯೋತ್ಪಾದಕರ ವಿರುದ್ಧ ಆಪರೇಷನ್ ಸಿಂದೂರ ಕಾರ್ಯಾಚರಣೆ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ ಎಂದು ಮೆಚ್ಚುಗೆ ಸೂಚಿಸಿದರು.
ಅಪರೇಷನ್ ಸಿಂದೂರದ ಮೂಲಕ 72 ತಾಸುಗಳಲ್ಲಿ ಪಾಕಿಸ್ತಾನಕ್ಕೆ ನಮ್ಮ ಸೈನ್ಯÀವು ಯಾವ ತಕ್ಕ ಉತ್ತರ ಕೊಟ್ಟಿದೆ. ಪಾಕಿಸ್ತಾನದ ಸುಮಾರು 16 ಕ್ಕೂ ಹೆಚ್ಚು ವಾಯುನೆಲೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿದೆ. ಆದ್ದರಿಂದ ನಮ್ಮ ಸೈನಿಕರಿಗೆ ಕೃತಜ್ಞತೆ ಸಲ್ಲಿಸಲು ಈ ಯಾತ್ರೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.