ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಮಾತ್ರವಲ್ಲದೆ ವಯಸ್ಕ ಮಕ್ಕಳು ಕೂಡ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಆದೇಶ ಪ್ರಕಟಿಸಿದೆ.
ವಯಸ್ಕರೆಂಬ ಕಾರಣ ನೀಡಿ ಮೃತರ ಮಕ್ಕಳಿಗೆ ಪರಿಹಾರ ನೀಡುವುದಕ್ಕೆ ನಿರಾಕರಿಸಿದ್ದ ನ್ಯಾಯಾಧಿಕರಣದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ. ಎಂ. ಜೋಷಿ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ರಸ್ತೆ ಅಪಘಾತದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಪರಿಣಾಮ ಇಡೀ ಕುಟುಂಬ ಸಂಕಷ್ಟ ಎದುರಸಬೇಕಾಗುತ್ತದೆ. ಆದ್ದರಿಂದ ಎಲ್ಲ ವಾರಸುದಾರರು ಪರಿಹಾರ ಪಡೆಯುವುದಕ್ಕೆ ಅರ್ಹರಾಗಿರುತ್ತಾರೆ. ವಿವಾಹಿತ ಹೆಣ್ಣು ಮಕ್ಕಳೂ ಕೂಡ ಮೋಟಾರು ವಾಹನ ಕಾಯ್ದೆಯಡಿ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ. ಈ ಅಂಶಗಳನ್ನು ಪರಿಗಣಿಸಿದ ನ್ಯಾಯಪೀಠವು ಪುತ್ರರು ಪರಿಹಾರಕ್ಕೆ ಅರ್ಹರು ಎಂದು ಹೇಳಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುಭಾಷ್ ಎಂಬವರ ಪತ್ನಿ ಮತ್ತು ಇಬ್ಬರು ವಯಸ್ಕ ಪುತ್ರರು ತಲಾ 52 ಸಾವಿರ ರೂ. ಪರಿಹಾರ ಪಡೆಯುವುದಕ್ಕೆ ಅರ್ಹರು ಎಂದು ಪೀಠ ಹೇಳಿದೆ. 2019ರ ಏಪ್ರಿಲ್ 7ರಂದು ಕಲಬುರಗಿಯ ಸುಭಾಷ್ ಎಂಬವರು ಮೊಮ್ಮಗನೊಂದಿಗೆ ಇದ್ದಾಗ ಬೈಕ್ ಮತ್ತು ಕಾರು ಅಪಘಾತಗೊಂಡು ಸುಭಾಷ್ ಮೃತಪಟ್ಟಿದ್ದರು. ವಿಚಾರಣೆ ನಡೆಸಿದ್ದ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ, ಮೃತರ ಪತ್ನಿಗೆ 10.30 ಲಕ್ಷ ರೂ. ಪರಿಹಾರ ನೀಡಿತ್ತು. ಇಬ್ಬರೂ ಪುತ್ರರು ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇಬ್ಬರೂ ಅರ್ಥಿಕವಾಗಿ ಸ್ವತಂತ್ರರಾಗಿದ್ದಾರೆ, ಅವರನ್ನು ಅವಲಂಬಿತರು ಎಂದು ಪರಿಗಣಿಸುವುದಿಲ್ಲ ಎಂದು ನ್ಯಾಯಾಧಿಕರಣ ತಿಳಿಸಿತ್ತು. ಈ ಆದೇಶವನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೃತರ ಮಾಸಿಕ ಆದಾಯ 15 ಸಾವಿರ ರೂ.ಗಳಿತ್ತು. ನ್ಯಾಯಾಧಿಕರಣ ಮೃತರ ಆದಾಯವನ್ನು ಪರಿಗಣಿಸಿ ಪರಿಹಾರಕ್ಕೆ ಆದೇಶ ನೀಡಬೇಕು. ಪುತ್ರರಿಗೂ ಪರಿಹಾರ ನೀಡಬೇಕು ಎಂದು ವಾದಿಸಿದ್ದರು.