ಬೆಂಗಳೂರು: ಇಡೀ ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿದೆ. ಇದಕ್ಕೆ ಹೋರಾಟ ಮಾಡಿದ ಸಂಘಟನೆಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಶಾಸಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಕರ್ನಾಟಕ ಬಂದ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳಲ್ಲಿ ಬಂದ್ ಅವರದ್ದೇ ರೂಪದಲ್ಲಿ ನಡೆದಿದೆ. ಕೆಲವು ಕಡೆ ಬಸ್ ಓಡಾಡುತ್ತಿದ್ದಾವೆ, ಜನ ಇಲ್ಲ. ಬಸ್ ನಿಲ್ದಾಣದಲ್ಲಿ ಜನ ಇಲ್ಲ. ಕನ್ನಡಿಗರಿಗಾಗಿ ಕರೆದ ಬಂದ್ ಯಶಸ್ವಿ ಆಗಿದೆ. ಬಂದ್ನ ಬೇಡಿಕೆ ಎಲ್ಲವನ್ನೂ ಜನರ ಮುಂದೆ ಸರ್ಕಾರದ ಮುಂದೆ ಇಟ್ಟಿದ್ದೇವೆ ಎಂದರು.
ನಮ್ಮವರನ್ನ ಬಂಧನ ಮಾಡಿದ್ದಾರೆ. ಬೆಂಗಳೂರು ಕಮಿಷನರ್ ಚಾಲೆಂಜ್ ತೆಗೆದುಕೊಂಡಿದ್ದಾರೆ. ಇವರು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಭಾಸ್ಕರ್ ರಾವ್ ರೀತಿ ಇವರು ರಾಜಕೀಯಕ್ಕೆ ಬರುತ್ತಾರೋ ಏನೋ ಗೊತ್ತಿಲ್ಲ. ನನಗೂ ನೊಟೀಸ್ ಕೊಟ್ಟಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಹೋರಾಟ ಮಾಡಿ ಅಂದಿದ್ದಾರೆ. ಟೌನ್ ಹಾಲ್ನಲ್ಲಿ ಪರ್ಮಿಷನ್ ಇಲ್ಲ ಅಂದಿದ್ದಾರೆ. ಬಂದ್ ಹತ್ತಿಕ್ಕೋ ಕೆಲಸ ಮಾಡಬಾರದಿತ್ತು. ನಾವು ಮಾಡಿರೋ ಹೋರಾಟದಲ್ಲಿ ಒಂದು ಹನಿ ನೀರು ಸಿಗದ ರೀತಿ ಆಗಬೇಕಿತ್ತು. ಆದರೂ ಯಶಸ್ಸು ಸಿಕ್ಕಿದೆ ಎಂದು ಹೇಳಿದರು.
ನಮ್ಮ ಹೋರಾಟ ನಿರಂತರವಾಗಿರುತ್ತದೆ, ಇಲ್ಲಿಗೆ ನಿಲ್ಲೋದಿಲ್ಲ. ಅನೇಕ ಪಿತೂರಿ ಮಾಡಿದರು. ನೈತಿಕತೆ ಬೆಂಬಲ ಅಂತ ಈಗ ಹುಟ್ಟಿದೆ. ನಮಗೆ ಈ ಬೆಂಬಲ ಬೇಡ. ಹೋಟೆಲ್ನವರಿಗೆ ಭಾರಿ ದುರಹಂಕಾರ ಬಂದಿದೆ. ಎಲ್ಲದೂ ಪೊಲೀಸ್ ಕೈಯಲ್ಲೇ ಇದೆ. ತೀರ ಹತ್ತಿಕ್ಕುವ ಮಟ್ಟಕ್ಕೆ ಹೋಗಬಾರದಿತ್ತು. ಆದರೂ ಬಂದ್ ಯಶಸ್ವಿ ಆಗಿದೆ ಎಂದರು.