ಬೆಂಗಳೂರು: ಅಂತಾರಾಷ್ಟ್ರೀಯ ನಗರವಾಗಿರುವ ಬೆಂಗಳೂರಿನಲ್ಲಿ ರಾತ್ರಿ 1 ಗಂಟೆವರೆಗೆ ಪಬ್ ತೆರೆಯುವ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ ಶಿವಕುಮಾರ್ ವಿಧಾನಪರಿಷತ್ ಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಹೆಚ್. ಎಸ್ ಗೋಪಿನಾಥ್ ಪ್ರಶ್ನೆಗೆ ಅಬಕಾರಿ ಸಚಿವ ತಿಮ್ಮಾಪುರ್ ಪರವಾಗಿ ಉತ್ತರಿಸಿದ ಸಚಿವರು,ನಿಗದಿತ ಅವಧಿ ಮೀರಿ ನಗರದಲ್ಲಿ ಪಬ್ಗಳನ್ನು ತೆರೆದಿರುವ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದರು., ಬೆಂಗಳೂರು ನಗರದಲ್ಲಿ ಪಬ್ ಬೆಳಗ್ಗೆ 10.30ರಿಂದ ರಾತ್ರಿ 11.30ರ ವರೆಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೋಪಿನಾಥ್, ನಗರದಲ್ಲಿ ನಿಗದಿತ ಅವಧಿ ಮೀರಿ ಪಬ್ಗಳು ಕಾರ್ಯಾಚರಣೆ ನಡೆಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಇದರ ಬದಲಾಗಿ ಕಾರ್ಯಾಚರಣೆ ಅವಧಿ ವಿಸ್ತರಿಸುವಂತೆ ಮನವಿ ಮಾಡಿದರು.
ಅವಧಿ ವಿಸ್ತರಣೆ ಮಾಡಬೇಕಾದ ಅಗತ್ಯವಿದೆ. ಬೆಂಗಳೂರು ಇಂಟರ್ ನ್ಯಾಷನಲ್ ಸಿಟಿಯಾಗಿದೆ. ನಗರವನ್ನು ಸದಾ ಚಟುವಟಿಕೆಯಿಂದ ಇರಿಸುವಂತೆ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಹೀಗಾಗಿ ಗೃಹ ಸಚಿವರು ಹಾಗೂ ಅಬಕಾರಿ ಇಲಾಖೆ ಸಚಿವರ ಜೊತೆ ಚರ್ಚಿಸಿ, ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.