Menu

ದೇಶ ಕೇವಲ ಗುಜರಾತ್, ಉತ್ತರ ಪ್ರದೇಶಕ್ಕೆ ಸೀಮಿತವಲ್ಲ: ಮಾಜಿ ಸಂಸದ ಡಿ.ಕೆ. ಸುರೇಶ್

dk suresh

ಬೆಂಗಳೂರು: ಈ ದೇಶ ಕೇವಲ ಗುಜರಾತ್, ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಎಲ್ಲಾ ರಾಜ್ಯಗಳು ಸಮಾನಾಂತರ ಹಕ್ಕು ಹೊಂದಿವೆ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲು ನೀಡಬೇಕು” ಎಂದು ಮಾಜಿ ಸಂಸದ ಡಿಕೆ ಸುರೇಶ್ ಎಚ್ಚರಿಕೆ ನೀಡಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸುರೇಶ್ ಅವರು ಶನಿವಾರ ಮಾತನಾಡಿದರು.

ಅಮಿತ್ ಶಾ ಅವರ ಕ್ಷೇತ್ರ ಮರು ವಿಂಗಡಣೆ ಹೇಳಿಕೆ ಹಾಗೂ ತೆರಿಗೆ ಪಾಲಿನ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಕೇಂದ್ರ ಸರ್ಕಾರ ಪ್ರತಿ ಹಂತದಲ್ಲೂ ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಬಲಿಷ್ಠವಾದ ರಾಷ್ಟ್ರ ನಿರ್ಮಾಣ ಮಾಡಬೇಕಾದರೆ ರಾಜ್ಯಗಳಿಗೆ ಶಕ್ತಿ ತುಂಬಬೇಕು. ಆದರೆ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಒಂದಲ್ಲಾ ಒಂದು ರೀತಿ ಕಾನೂನು ಹಾಗೂ ನಿಯಮಗಳನ್ನು ಹೇರುತ್ತಿದೆ” ಎಂದು ತಿಳಿಸಿದರು.

“ತೆರಿಗೆ ವಿಚಾರದಲ್ಲಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ನಾನು ಈಗಾಗಲೇ ಪ್ರಸ್ತಾಪ ಮಾಡಿದ್ದು, ನಾವು ಎಷ್ಟು ತೆರಿಗೆ ಕಟ್ಟುತ್ತಿದ್ದೇವೆ. ಎಷ್ಟು ಪಾಲು ಅವರು ನೀಡುತ್ತಿದ್ದಾರೆ. ರಾಜ್ಯಗಳ ಅಭಿವೃದ್ಧಿ ಹೇಗೆ ಕುಂಠಿತವಾಗಿದೆ, ಕೇಂದ್ರ ಸರ್ಕಾರ ನಮ್ಮ ರಾಜ್ಯಗಳನ್ನು ಯಾವ ದೃಷ್ಟಿಯಿಂದ ನೋಡುತ್ತಿದೆ ಎಂದು ಹೇಳಿದ್ದೇನೆ” ಎಂದರು.

“ಇನ್ನು ಹಿಂದಿ ಹೇರಿಕೆ ವಿಚಾರವೂ ರಾಜ್ಯಗಳನ್ನು ದುರ್ಬಲಗೊಳಿಸುವ ಪ್ರಯತ್ನ. ಆರ್ಥಿಕ ನೀತಿಯಲ್ಲಿ ಶೇ.1ರಷ್ಟು ತೆರಿಗೆ ಪಾಲು ಕಡಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ವಿಚಾರದಲ್ಲಿ ರಾಜ್ಯ ಹಾಗೂ ರಾಷ್ಟ್ರದ ಜನ ತಿರುಗಿ ಬಿದ್ದರೆ ಕಷ್ಟವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ನಮ್ಮ ಪಾಲಿನ ತೆರಿಗೆ ಹಣ ನೀಡುವುದನ್ನು ಕಲಿಯಬೇಕು. ಕೇಂದ್ರ ಸರ್ಕಾರದ ತೀರ್ಮಾನಗಳು ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸುವಂತೆ ಇರಬೇಕು. ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳನ್ನು ಕಡೆಗಣಿಸುವುದು ಸರಿಯಲ್ಲ” ಎಂದು ಎಚ್ಚರಿಸಿದರು.

ಸಂಘಟಿತವಾಗಿ ಧ್ವನಿ ಎತ್ತಬೇಕು

“ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ, ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ನಾನು ಈ ಹಿಂದೆಯೇ ಹೇಳಿದ್ದೇನೆ. ಈ ವರ್ಷ ಜನಗಣತಿ ನಡೆಯುವ ಸಾಧ್ಯತೆ ಇದ್ದು, ಮಹಿಳಾ ಮೀಸಲಾತಿ ಜಾರಿಯನ್ನು ಮಾಡಲಾಗುತ್ತಿದೆ. ಜನಸಂಖ್ಯೆ ಹಾಗೂ ಕ್ಷೇತ್ರ ವಿಂಗಡಣೆ ನೋಡಿದರೆ ದೇಶದ ವ್ಯವಸ್ಥೆ ಸಂಪೂರ್ಣವಾಗಿ ಉತ್ತರ ಭಾರತದ ಪಾಲಾಗಲಿದೆ. ಇದನ್ನು ಸಾಧಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ. ಇದರ ವಿರುದ್ಧ ನಮ್ಮ ಕನ್ನಡಿಗರು, ದಕ್ಷಿಣ ರಾಜ್ಯಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ದಕ್ಷಿಣ ಭಾರತದ ಮೇಲೆ ಕೇಂದ್ರ ತೋರುತ್ತಿರುವ ಮಲತಾಯಿ ಧೋರಣೆ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತಬೇಕು. ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಅಸ್ಥಿತ್ವ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಎಲ್ಲಾ ಪಕ್ಷದ ನಾಯಕರಿಗೆ ಮನವಿ ಮಾಡುತ್ತೇನೆ” ಎಂದು ಕರೆ ನೀಡಿದರು.

ಇದು ಕಾನೂನಾತ್ಮಕವಾಗಿ ಹತ್ತಿಕ್ಕುವ ಪ್ರಯತ್ನವೇ ಎಂದು ಕೇಳಿದಾಗ, “ಹೌದು, ಕಾನೂನು ಮಾಡಿ ಅವರ ಸಂಖ್ಯಾಬಲದ ಮೇಲೆ ನಮ್ಮನ್ನು ಸದೆಬಡಿಯುವ ಪ್ರಯತ್ನ ಮಾಡಲಾಗುವುದು. ಮುಂದೆ ನಾವು ಏನೇ ಪ್ರಶ್ನೆ ಮಾಡಿದರು, ಕಾನೂನಿನ ನೆಪವೊಡ್ಡಿ ಎಲ್ಲವನ್ನು ನಿಭಾಯಿಸುವ ಕಲೆಯನ್ನು ಬಿಜೆಪಿ ಬಹಳ ಚೆನ್ನಾಗಿ ರೂಢಿಸಿಕೊಂಡಿದೆ” ಎಂದರು.

ಅತ್ಯಾಚಾರ ಮಾಡಿರುವವರ ಬಗ್ಗೆ ಮಾತನಾಡುವುದಿಲ್ಲ

ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಹೆದರಿಸುತ್ತಿದ್ದಾರೆ ಎಂಬ ಮುನಿರತ್ನ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ವಿಧಾನಸೌಧದಲ್ಲಿ ಅತ್ಯಾಚಾರ ಮಾಡಿರುವವರ ಕುರಿತು ನಾನು ಮಾತನಾಡುವುದಿಲ್ಲ. ಮಾಧ್ಯಮಗಳು ಇಂತಹವರ ಬಗ್ಗೆ ಕೇಳುತ್ತಿದ್ದೀರಾ? ಆತನ ಅತ್ಯಾಚಾರ ಪ್ರಕರಣಗಳ ಬಗ್ಗೆ, ಆರೋಪ ಪಟ್ಟಿಯಲ್ಲಿರುವ ಅಂಶಗಳ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡಲಿ. ಆತ ಓರ್ವ ರೇಪಿಸ್ಟ್ ಎಂದು ದೂರುದಾರರು ಹೇಳಿದ್ದಾರೆ. ದೇವಾಲಯ ಎಂದು ಪರಿಗಣಿಸಿರುವ ವಿಧಾನಸೌಧದಲ್ಲಿ ಇಂತಹ ನೀಚ ಕೃತ್ಯ ಎಸಗಿರುವುದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅತ್ಯಾಚಾರದ ಬಗ್ಗೆ ನೀವು ಆತನನ್ನು ಪ್ರಶ್ನೆ ಮಾಡಿದ್ದೀರಾ? ಈ ಪ್ರಕರಣಗಳಲ್ಲಿ ಆತ ನಿರ್ದೋಷಿ ಎಂದು ತೀರ್ಮಾನ ಆಗುವವರೆಗೂ ಆತನನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು. ಆತನಿಗೆ ಒಕ್ಕಲಿಗರ ಮೇಲೆ ಪ್ರೀತಿ ಬಂದಿರುವುದು ಈಗಲ್ಲ. ಒಕ್ಕಲಿಗರ ತಾಯಂದಿರನ್ನು ಕೆಟ್ಟದಾಗಿ ಬಳಸಿಕೊಳ್ಳಲು ಆಲೋಚಿಸಿದಾಗ. ಒಕ್ಕಲಿಗರ ಬಗ್ಗೆ ಯಾವೆಲ್ಲಾ ಅವಾಚ್ಯ ಶಬ್ಧ ಬಳಸಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಈಗ ಈ ರೀತಿ ಮುಖವಾಡ ಹಾಕಿಕೊಳ್ಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಮುನಿರತ್ನ ಅವರು ಎಸ್.ಎಂ ಕೃಷ್ಣ ಹಾಗೂ ಡಿ.ಕೆ. ರವಿ ಅವರ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೇಳಿರುವುದರ ಬಗ್ಗೆ ಪ್ರಶ್ನಿಸಿದಾಗ, “ಕೊರಂಗು ಮುನಿರತ್ನ ನಾಯ್ಡು ಕಬ್ಬಿಣದ ಪ್ರತಿಮೆ ಮಾಡಬೇಕು ಎಂಬ ಅರ್ಜಿಯೂ ನನಗೆ ಬಂದಿದೆ. ಈ ಬಗ್ಗೆ ನಾನು ಡಿಸಿಎಂ ಬಳಿ ಮನವಿ ಮಾಡುತ್ತೇನೆ” ಎಂದು ತಿರುಗೇಟು ನೀಡಿದರು.

 

Related Posts

Leave a Reply

Your email address will not be published. Required fields are marked *