ಕೋಲಾರ: ಬೆಳಗಾವಿಯಲ್ಲಿ ಗಲಾಟೆ ಮಾಡುವವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದೇವೆ. ಹೀಗೆಯೇ ಮುಂದುವರಿದರೆ ಮುಂದಿನ ಕಠಿಣ ಕ್ರಮವಹಿಸುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಎಚ್ಚರಿಸಿದರು.
ನಗರದಲ್ಲಿ ಸೋಮವಾರ ರಾಜ್ಯಮಟ್ಟದ ಜನಪರ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಜತೆಯೂ ಈ ಸಂಬಂಧ ಮಾತನಾಡಿದ್ದೇವೆ. ಪುಂಡರ ಮೇಲೆ ನೇರವಾಗಿ ಕ್ರಮ ವಹಿಸಲಾಗುವುದು. ಬೆಳಗಾವಿ ನಮ್ಮ ರಾಜ್ಯದ ಪ್ರಮುಖ ಅಂಗ. ಅಲ್ಲೇ ಸುವರ್ಣಸೌಧ ನಿರ್ಮಿಸಿದ್ದೇವೆ ಎಂದರು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎಲ್ಲಾ ದಾಖಲೆ ಮುರಿಯುತ್ತಾರೆ ಎಂಬ ಪಕ್ಷದ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ದಾಖಲೆ ಮುರಿಯಲು ಅಲ್ಲ. ರಾಜ್ಯ ಅಭಿವೃದ್ಧಿಗಾಗಿ ಅವರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು
ಎಸ್ಟಿಪಿ, ಟಿಎಸ್ಪಿ ಯೋಜನೆ ತಂದಿದ್ದು ಯಾರು ಎಂಬ ಪ್ರಶ್ನೆಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಬಳಿ ಕೇಳಿ. ಅವರಿಗೆ ತಾಕತ್ತು ಇದ್ದರೆ, ಪರಿಶಿಷ್ಟರ ಬಗ್ಗೆ ಕಾಳಜಿ ಇದ್ದರೆ ದೇಶದಾದ್ಯಂತ ಏಕೆ ತರಬಾರದು? ಬಜೆಟ್ನಲ್ಲಿ ಶೇ.೨೪.೧ರಷ್ಟು ಅನುದಾನ ಮೀಸಲಿಡಲಿ ನೋಡೋಣ ಎಂದು ಸವಾಲು ಹಾಕಿದರು.
ಹಿಂದೆ ಪರಿಶಿಷ್ಟರಿಗೆ ಕೇವಲ ೩ ಸಾವಿರ ಕೋಟಿ ಅನುದಾನ ತೆಗೆದಿರಿಸುತ್ತಿದ್ದರು. ನಮ್ಮ ಸರಕಾರದಲ್ಲಿ ೩೫ ಸಾವಿರ ಕೋಟಿ ಅನುದಾನ ನಿಗದಿಪಡಿಸಿದೆ ಎಂದು ಹೇಳಿದರು.