ಹಣದ ಸಮೇತ ಎಟಿಎಂ ಮಿಷನ್ನ್ನನ್ನು ಕಳ್ಳರು ಕದ್ದೊಯ್ದಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ರಸ್ತೆಯ ಪಕ್ಕದಲ್ಲೇ ಇರುವ ಇಂಡಿಯನ್ ಬ್ಯಾಂಕ್ನ ಎಟಿಎಂ ಕೇಂದ್ರಕ್ಕೆ ಎಂಟ್ರಿಕೊಟ್ಟಿರುವ ಚೋರರು, ಸಿಸಿಟಿವಿ ನಾಶ ಮಾಡಿ ಹಣದ ಸಮೇತ ಎಟಿಎಂ ಮಿಷನ್ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಎಟಿಎಂನಲ್ಲಿ ಲಕ್ಷಾಂತರ ರೂ ಹಣವಿದ್ದು ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜ.29 ರಂದು ಹಾಸನ ಹೊರವಲಯದ ಹನುಮಂತಪುರದ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದ ಎಟಿಎಂ ಮಿಷನ್ನನ್ನು ಕದ್ದೊಯ್ದು ಅದರಲ್ಲಿದ್ದ ಹಣ ತೆಗೆದುಕೊಂಡು ಶಂಕರನಹಳ್ಳಿ ಬಳಿಯಿರುವ ನಾಲೆಗೆ ಮಿಷನ್ನನ್ನು ಎಸೆದು ಕಳ್ಳರು ಎಸ್ಕೇಪ್ ಆಗಿದ್ದರು.
ಇದುವರೆಗೂ ಕಳ್ಳರ ಸುಳಿವು ಪತ್ತೆಯಾಗಿಲ್ಲ. ಇದೀಗ ಹದಿನೈದು ದಿನಗಳ ಅಂತರದಲ್ಲಿ ಮತ್ತೊಂದು ಎಟಿಎಂ ಮಿಷನ್ ಕಳ್ಳತನ ನಡೆದಿರುವುದು ಬ್ಯಾಂಕ್ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.