ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಜಿದ್ದಿ ಬಿದ್ದಿರುವ ಬಿಜೆಪಿ ಆಡಳಿತದ ರಾಜ್ಯಗಳ ಸಾಲಿಗೆ ಈಗ ಗುಜರಾತ್ ಸೇರ್ಪಡೆ ಆಗಿದೆ.
ಉತ್ತರಾಖಂಡದಲ್ಲಿ ಈ ಸಂಹಿತೆ ಜಾರಿಗೆ ಬಂದ ಬೆನ್ನಲ್ಲಿಯೇ ಗುಜರಾತ್ಸರಕಾರವೂ ಅಂತಹುದೇ ಹೆಜ್ಜೆ ತುಳಿಯಲು ಮುಂದಾಗಿದೆ.
ಏಕರೂಪ ನಾಗರಿಕ ಸಂಹಿತೆಯ ಕರಡು ಮಸೂದೆಯನ್ನು ಸಿದ್ಧಪಡಿಸಲು ಗುಜರಾತ್ ಸರ್ಕಾರ ಮಂಗಳವಾರ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯು 45 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಿಳಿಸಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯ ಕರಡು ಮಸೂದೆಯನ್ನು ಸಿದ್ಧಪಡಿಸಲು, ನಾವು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ರಚಿಸಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.
ವರದಿಯನ್ನು ಸ್ವೀಕರಿಸಿದ ನಂತರ ಯುಸಿಸಿ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ನಿವೃತ್ತ ಐಎಎಸ್ ಅಧಿಕಾರಿ ಸಿ.ಎಲ್.ಮೀನಾ, ವಕೀಲ ಆರ್.ಸಿ.ಕೊಡೇಕರ್, ಶಿಕ್ಷಣ ತಜ್ಞ ದಕ್ಷೇಶ್ ಥಾಕರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಗೀತಾ ಶ್ರಾಫ್ ಅವರು ಕರಡು ಸಮಿತಿಯ ಸದಸ್ಯರಾಗಿದ್ದಾರೆ.