ಬೆಂಗಳೂರಿನ ನಾಗರಬಾವಿಯ ಹೋಟೆಲ್ವೊಂದರಲ್ಲಿ ತಡರಾತ್ರಿ ಅಗ್ನಿ ಆಕಸ್ಮಿಕ ನಡೆದಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಂಕಿಯಿಂದಾಗಿ ಹೋಟೆಲ್ನಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಉಸಿರುಗಟ್ಟಿ ಈ ಸಾವು ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಾಗ ಒಟ್ಟು ಐವರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೋಟೆಲ್ ಒಳಗೆ ಸಿಲುಕಿದ್ದವರನ್ನು ಭೀಮ, ಶಿವಾನಂದ, ಸತೀಶ್ ಮತ್ತು ರಾಜಕುಮಾರ್ ಎಂದು ಗುರುತಿಸಲಾಗಿದೆ.ಅಸ್ವಸ್ಥರಾಗಿದ್ದ 45 ವರ್ಷದ ರಾಜಕುಮಾರ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸ್ಥಿತಿ ಗಂಭೀರವಾಗಿದೆ. ಬೆಂಕಿ ದುರಂತ ಹೇಗೆ, ಯಾಕೆ ಸಂಭವಿಸಿತು ಎಂಬುದು ತನಿಖೆಯಿಂದ ಇನ್ನಷ್ಟೇ ಹೊರ ಬರಬೇಕಿದೆ.
ಅವಘಡ ಸಂಭವಿಸಿದಾಗ ಸಿಬ್ಬಂದಿ ಹೋಟೆಲ್ನ ಮೇಲಿನ ಮಹಡಿಯಲ್ಲಿ ಇದ್ದರು. ಬೆಂಕಿ ಅಲ್ಲಿಗೂ ವ್ಯಾಪಿಸಿ ಐವರು ಸಿಬ್ಬಂದಿ ವಾಸವಿದ್ದ ಜಾಗಕ್ಕೂ ಆವರಿಸಿತ್ತು.
ಶಿವಮೊಗ್ಗದ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದ ಯುವತಿ ಮರುದಿನ ಸಾವು
ಶಿವಮೊಗ್ಗ ನಗರದ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದ ಯುವತಿ ಒಂದೇ ದಿನದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಶಿಕಾರಿಪುರದ ಈಸೂರಿನ ನಿವಾಸಿ ನೇಹಾ (17) ಮೃತ ಯುವತಿ. ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಟು ತಿಂಗಳ ಹಿಂದೆ ಕಾಲೇಜಿಗೆ ಹೋಗುವಾಗ ಹಾವು ನೋಡಿ ನೇಹಾ ಬೆಚ್ಚಿಬಿದ್ದಿದ್ದಳು. ಓದುವ ವಿಚಾರದಲ್ಲಿಯೂ ಮಂಕಾಗಿದ್ದ ಈಕೆ ಬ್ಲೇಡ್ನಿಂದ ಕೈ ಕೊಯ್ದುಕೊಂಡಿದ್ದಳು. ದ್ವಿತೀಯ ಪಿಯುಸಿ ಪರೀಕ್ಷೆ ಕೂಡ ಬರೆದಿರಲಿಲ್ಲ. ಮೂರು ದಿನಗಳ ಹಿಂದೆಯೂ ಯುವತಿಯನ್ನು ಖಾಸಗಿ ನರ್ಸಿಂಗ್ ಹೋಂಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು.
ಶಿವಮೊಗ್ಗದ ಮಾನಸಧಾರ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದದವರು ನೇಹಾಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಿದರೆ ಗುಣಮುಖರಾಗುತ್ತಾಳೆ ಎಂದಿದ್ದರಂತೆ. ಗುರುವಾರ ಮಧ್ಯಾಹ್ನ ಪುನರ್ ವಸತಿ ಕೇಂದ್ರಕ್ಕೆ ಪೋಷಕರು ಸೇರಿಸಿದ್ದರು. ಶುಕ್ರವಾರ ಮಧ್ಯಾಹ್ನ ಪುನರ್ವಸತಿ ಕೇಂದ್ರದ ಕಡೆಯಿಂದ ಪೋಷಕರಿಗೆ ಸಾವರ್ ಲೈನ್ ರಸ್ತೆಯಲ್ಲಿರುವ ಖಾಸಗಿ ನರ್ಸಿಂಗ್ ಹೋಂಗೆ ಬನ್ನಿ. ನೇಹಾ ಕೈ ಕೊಯ್ದುಕೊಂಡಿದ್ದಾಳೆ ಎಂದು ತಿಳಿಸಲಾಗಿದೆ. ಕುಟುಂಬ ನರ್ಸಿಂಗ್ ಹೋಂಗೆ ಬಂದ ವೇಳೆ ಆಕೆ ಮೃತಳಾಗಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.


