ಚಿಕ್ಕಮಗಳೂರಿನ ಗಾಂಧಿನಗರದಲ್ಲಿ ಒಂಟಿಯಾಗಿರುವ ವಿವಾಹಿತ ಹಿಂದೂ ಮಹಿಳೆಯ ಮನೆಯಲ್ಲಿದ್ದ ಯುವ ಕಾಂಗ್ರೆಸ್ ಮುಖಂಡನ ಮೇಲೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿದೆ.
ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಹಿಲ್ ಶರೀಫ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾತ್ರಿ ಮಹಿಳೆಯ ಮನೆಗೆ ರಾಹಿಲ್ ಶರೀಫ್ ಬಂದಿದ್ದು, ಮನೆಯಿಂದ ಹೊರ ಹೋಗ ದಿರುವುದನ್ನು ಗಮನಿಸಿದ ಸ್ಥಳೀಯ ಕೆಲವು ಯುವಕರು ಗುಂಪಾಗಿ ಮಹಿಳೆಯ ಮನೆಗೆ ತೆರಳಿ ಪ್ರಶ್ನಿಸಿದ ವೇಳೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಮಾತಿನ ಚಕಮಕಿ ತೀವ್ರಗೊಂಡು ಯುವಕರ ಗುಂಪು ರಾಹಿಲ್ ಶರೀಫ್ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗುಂಪು ಹಲ್ಲೆಯಿಂದ ರಾಹಿಲ್ ಶರೀಫ್ಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದ್ದು, ಕೆಲವರು ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಹಿಳೆಯನ್ನು ದುರ್ಬಳಕೆ ಮಾಡಿಕೊಂಡು, ಮದುವೆ ಹಾಗೂ ಮಕ್ಕಳ ಬಗ್ಗೆ ತಪ್ಪು ಭರವಸೆ ನೀಡಿದ್ದಾನೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಮಹಿಳೆಯೊಂದಿಗೆ ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಲ್ಲೆ ನಡೆಸಿರುವ ಯುವಕರ ಗುರುತು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.


