ರಾಯಚೂರಿನ ಲಿಂಗಸೂಗೂರು ತಾಲೂಕಿನ ಜಕ್ಕೇರುಮಡು ತಾಂಡದಲ್ಲಿ ಆಸ್ತಿಗಾಗಿ ನಡೆದ ಕೌಟುಂಬಿಕ ಕಲಹದಲ್ಲಿ ಮಗನೊಬ್ಬನ ತಾಯಿಯ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಚಂದವ್ವ (55) ಕೊಲೆಯಾದ ಮಹಿಳೆ. ಕುಮಾರ ತಾಯಿಯನ್ನು ಕೊಲೆ ಮಾಡಿ ಪರಾರಿಯಾದವ. ಕುಮಾರ ಮದ್ಯದ ಅಮಲಿನಲ್ಲಿ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕುಮಾರ ಗ್ರಾಮಕ್ಕೆ ಬಂದಿದ್ದ. ಪಿತ್ರಾರ್ಜಿತ ಮೂರು ಎಕರೆ ಜಮೀನನ್ನು ಅಣ್ಣ ತಮ್ಮಂದಿರಿಬ್ಬರಿಗೆ ಪಾಲು ಮಾಡುವಂತೆ ಕುಮಾರ ತಾಯಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ. ತಾಯಿ ಆಸ್ತಿ ಭಾಗಮಾಡಲು ಒಪ್ಪಿರಲಿಲ್ಲ.
ಇದೇ ಆಸ್ತಿ ಪಾಲು ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಗಲಾಟೆ ವಿಕೋಪಕ್ಕೆ ಹೋಗಿ ತಾಯಿಯ ಕೊಲೆಯಲ್ಲಿ ಕೊನೆಯಾಗಿದೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲೆ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


