ಕೇಂದ್ರ ಸಾರ್ವಜನಿಕ ಸೇವಾ ಆಯೋಗದ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಬೆಂಗಳೂರಿನಲ್ಲಿ ಯುಪಿಎಸ್ಸಿ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವುದು ವಿಕೇಂದ್ರೀಕರಣ, ಪ್ರಾದೇಶಿಕ ಸಮಾನತೆ ಮತ್ತು ಯುವ ಸಬಲೀಕರಣದ ಗುರಿ ಸಾಧಿಸಲು ಇಡುವ ಹೆಜ್ಜೆಯಾಗಲಿದೆ ಎಂದು ಕೇಂದ್ರ ಸಿಬ್ಬಂದಿ, ಪಿಜಿ ಮತ್ತು ಪಿಂಚಣಿ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿ ರಚನಾ ಶಾ ಅವರಿಗೆ ಸಿಎಸ್ ಪತ್ರ ಬರೆದಿದ್ದಾರೆ.
ಈ ಮೂಲಕ ಕರ್ನಾಟಕ ಮತ್ತು ದಕ್ಷಿಣ ರಾಜ್ಯಗಳು ಯುಪಿಎಸ್ಸಿ ಸೇವೆಗಳು ಮತ್ತು ಅವಕಾಶಗಳಿಗೆ ಸಮಾನ ಪ್ರವೇಶ ಪಡೆಯುವ ಅವಕಾಶ ದೊರೆಯಲಿದೆ. ಪರೀಕ್ಷೆಗಳು ಮತ್ತು ಇತರ ಪ್ರಕ್ರಿಯೆಗಳ ಆಡಳಿತಾತ್ಮಕ ದಕ್ಷತೆ ಸುಗಮಬಾಗಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿಯನ್ನು ಆದಷ್ಟು ಬೇಗ ಆರಂಭಿಸುವಂತೆ ಮನವಿ ಮಾಡಲಾಗಿದೆ.
ಐಎಎಸ್ ತರಬೇತಿ ಕೇಂದ್ರದ ವಿನಯ್ ಕುಮಾರ್ ಜಿಬಿ ಮಾತನಾಡಿ, ಇದು ಅನುಷ್ಠಾನಕ್ಕೆ ಬಂದರೆ ಯುಪಿಎಸ್ಸಿ ಇತಿಹಾಸದಲ್ಲಿ ಪ್ರಾದೇಶಿಕ ಕೇಂದ್ರವನ್ನು ಹೊಂದಿರುವ ಮೊದಲ ನಗರ ಬೆಂಗಳೂರು ಆಗಲಿದೆ. ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲು ಸಂವಿಧಾನದಲ್ಲಿ ಅವಕಾಶವಿದೆ. ಯುಪಿಎಸ್ಸಿ ನಡೆಸುವ ಪರೀಕ್ಷೆಗಳಿಗೆ, ವಿಶೇಷವಾಗಿ ನಾಗರಿಕ ಸೇವೆಗಳಿಗೆ ತಯಾರಿ ನಡೆಸಲು ಜಾಗೃತಿ ಮೂಡಿಸಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.


