ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಯಲಮಂಚಿಲಿ ಬಳಿ ಟಾಟಾನಗರ್-ಎರ್ನಾಕುಲಂ ಎಕ್ಸ್ಪ್ರೆಸ್ ರೈಲಿನ ಎರಡು ಏಸಿ ಬೋಗಿಗಳು ಮಧ್ಯರಾತ್ರಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಘಟನೆಯಲ್ಲಿ ವಿಜಯವಾಡ ನಿವಾಸಿ 70 ವರ್ಷದ ಚಂದ್ರಶೇಖರ್ ಸುಂದರಂ ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ.
ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಇನ್ನೊಂದರಲ್ಲಿ 76 ಪ್ರಯಾಣಿಕರು ಇದ್ದರು. ಲೋಕೋ ಪೈಲಟ್ ಬೆಂಕಿ ಗಮನಿಸಿ ತಕ್ಷಣ ರೈಲನ್ನು ನಿಲ್ಲಿಸಿದ್ದರಿಂದ ಹೆಚ್ಚಿನ ಪ್ರಯಾಣಿಕರು ಸುರಕ್ಷಿತ ವಾಗಿ ಉಳಿದಿದ್ದಾರೆ. ಚಂದ್ರಶೇಖರ್ ಸುಂದರಂ ಬೋಗಿಯೊಳಗೆ ಸಿಲುಕಿಕೊಂಡು ಮೃತಪ್ಟಿದ್ದಾರೆ.
ಎರಡು ಬೋಗಿಗಳು ಸಂಪೂರ್ಣ ಧ್ವಂಸವಾಗಿ ಪ್ರಯಾಣಿಕರ ಲಗೇಜ್ಗಳು ಭಸ್ಮವಾಗಿವೆ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ತೊಂದರೆಗೊಳಗಾದ ಪ್ರಯಾಣಿಕರನ್ನು ಬಸ್ಗಳ ಮೂಲಕ ಸಮರ್ಲಕೋಟೆಗೆ ಕಳುಹಿಸಲಾಗಿದ್ದು, ಅಲ್ಲಿ ಹೊಸ ಏಸಿ ಬೋಗಿಗಳನ್ನು ಜೋಡಿಸಿ ಪ್ರಯಾಣ ಮುಂದುವರಿಸಲಾಗಿದೆ ಎಂದು ಅನಕಾಪಲ್ಲಿ ಎಸ್ಪಿ ತುಹಿನ್ ಸಿನ್ಹಾ ತಿಳಿಸಿದ್ದಾರೆ.
ಬೆಂಕಿಯ ಕಾರಣ ಕುರಿತುಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಶಾರ್ಟ್ ಸರ್ಕ್ಯೂಟ್ ಅಥವಾ ಪ್ಯಾಂಟ್ರಿ ಕಾರ್ನಿಂದ ಬೆಂಕಿ ಹರಡಿರಬಹುದು ಎಂದು ಶಂಕಿಸಲಾಗಿದೆ. ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿವೆ. ಈ ದುರಂತದಿಂದ ವಿಶಾಖಪಟ್ಟಣಂ-ವಿಜಯವಾಡ ಮಾರ್ಗದಲ್ಲಿ ಕೆಲವು ರೈಲುಗಳ ಸಂಚಾರಕ್ಕೆ ತಾತ್ಕಾಲಿಕ ಅಡಚಣೆಯಾಗಿದೆ.


