ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಕತ್ತುಕೊಯ್ದು ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಕೊಲೆ ಮಾಡಿ ಪೊಲೀಸರ ಜೊತೆಗೆ ಓಡಾಡಿಕೊಂಡಿದ್ದ ಮೃತ ಯುವತಿಯ ಸಹದ್ಯೋಗಿಯನ್ನು ಬಂಧಿಸಿದ್ದಾರೆ.
ಚಿತ್ರದುರ್ಗದ ಹಿರಿಯೂರು ಮೂಲದ ಮಮತಾ (39) ಎಂಬುವರನ್ನು ಕುಮಾರಸ್ವಾಮಿ ಲೇಔಟ್ ನ ಪ್ರಗತಿಪುರದ ಬಾಡಿಗೆ ಮನೆಯಲ್ಲಿ ಡಿಸೆಂಬರ್ 24ರಂದು ರಾತ್ರಿ ಕತ್ತು ಸೀಳಿ ಹತ್ಯೆಗೈಯ್ಯಲಾಗಿತ್ತು. ಡಿಸೆಂಬರ್ 25ರಂದು ಪ್ರಕರಣ ಬೆಳಕಿಗೆ ಬಂದಿತ್ತು.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತಿದ್ದ ಮಮತಾ, ತನ್ನ ಸ್ನೇಹಿತೆಯೊಂದಿಗೆ ಒಟ್ಟಿಗೆ ವಾಸವಾಗಿದ್ದರು. ಡಿಸೆಂಬರ್ 24ರಂದು ಮಮತಾ ಅವರ ಸ್ನೇಹಿತೆ ಊರಿಗೆ ಹೋಗಿದ್ದಾಗ ಕೊಲೆ ನಡೆದಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಮಮತಾ ಸಾವಿನ ಸುದ್ದಿ ತಿಳಿದು ಜಯದೇವ ಆಸ್ಪತ್ರೆಯ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿತ್ತು. ಈ ವೇಳೆ ಕೊಲೆ ಮಾಡಿದ್ದ ಅರೋಪಿ ಮಮತಾ ಅವರ ಸಹದ್ಯೋಗಿ ಸುಧಾಕರ್ ಕೂಡ ಶವ ಸಾಗಾಟ ವೇಳೆ ಪೊಲೀಸರ ಜೊತೆಗೆ ಓಡಾಡಿಕೊಂಡಿದ್ದ.
ಮಮತಾ ಸಿಡಿಆರ್ ತನಿಖೆ ವೇಳೆ ಸುಧಾಕರ್ ಈ ಕೃತ್ಯ ಎಸಗಿರುವುದು ತಿಳಿದು ಬಂದಿದ್ದು, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ಸುಧಾಕರ್ ಹಾಗೂ ಮಮತಾ ಇಬ್ಬರೂ ಸ್ಟಾಫ್ ನರ್ಸ್ ಕೆಲಸ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಪರಸ್ಪರ ಪ್ರೀತಿ ಮೂಡಿತ್ತು. ಇತ್ತೀಚೆಗೆ ಕುಟುಂಬಸ್ಥರ ನಿರ್ಧಾರದ ಮೇರೆಗೆ ಬೇರೊಂದು ಯುವತಿಯೊಂದಿಗೆ ಸುಧಾಕರ್ಗೆ ನಿಶ್ಚಿತಾರ್ಥವಾಗಿತ್ತು.
ಈ ವಿಚಾರ ತಿಳಿದ ಮಮತಾ ತನ್ನನ್ನೇ ಮದುವೆಯಾಗು ಎಂದು ಸುಧಾಕರ್ನ ಮೇಲೆ ಒತ್ತಡ ಹೇರಲಾರಂಭಿಸಿದ್ದಳು. ಇದರಿಂದ ಹೆದರಿದ್ದ ಸುಧಾಕರ್ ಡಿಸೆಂಬರ್ 24ರಂದು ಮಮತಾಳ ಮನೆಗೆ ಬಂದು ಕತ್ತು ಕೊಯ್ದು ಹತ್ಯೆಗೈದು ಬಳಿಕ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


