ಗಂಗಾವತಿ ತಾಲೂಕಿನ ಅಂಜನಾದ್ರಿ ದೇವಸ್ಥಾನದಲ್ಲಿ ಪೂಜಾ ವಿಚಾರಕ್ಕೆ ಸ್ವಾಮೀಜಿಗಳ ನಡುವೆ ಗಲಾಟೆಯಾಗಿದೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಗೋವಿಂದನಾಂದ ಸರಸ್ವತಿ ಸ್ವಾಮೀಜಿ, ದೇವಸ್ಥಾನದ ಆರ್ಚಕರಾಗಿರುವ ವಿದ್ಯಾದಾಸಬಾಬಾ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಗಲಾಟೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಅಂಜನಾದ್ರಿ ದೇವಸ್ಥಾನದ ಆವರಣದ ಒಳಭಾಗದಲ್ಲೇ ಆಂಜನೇಯ ಸ್ವಾಮಿಯ ಗರ್ಭಗುಡಿಯ ಸಮೀಪ ಗಲಾಟೆ ನಡೆದಿದ್ದು, ಪೂಜಾ ಕಾರ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ವಿದ್ಯಾದಾಸಬಾಬಾ ಆರೋಪಿಸಿ ದ್ದಾರೆ.
ಹಂಪಿಯ ಗೋವಿಂದನಾಂದ ಸರಸ್ವತಿ ಸ್ವಾಮೀಜಿ ಹಲ್ಲೆ ಮಾಡಿದ್ದಾರೆಂಬ ಆರೋಪ ಕೂಡ ಕೇಳಿ ಬಂದಿದೆ. ದೇವಾಲಯದ ಅರ್ಚಕ ವಿದ್ಯಾದಾಸ ಬಾಬಾ ಪೂಜೆ ಸಲ್ಲಿಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಗೋವಿಂದಾನಂದ ಸರಸ್ವತಿ ಸ್ವಾಮೀಜಿಗಳು, ಅಂಜನಾದ್ರಿ ಬೆಟ್ಟದ ದೇವಾಲಯದಲ್ಲಿ ಹನುಮನನ್ನು ಪೂಜಿಸಲು ನನಗೆ ಮಾತ್ರ ಅಧಿಕಾರವಿದೆ ಎಂದು ಹೇಳಿದ್ದಾರೆ. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇಬ್ಬರೂ ಸ್ವಾಮೀಜಿಗಳು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಅರ್ಚಕ ವಿದ್ಯಾದಾಸ ಬಾಬಾ ಅವರು ಗೋವಿಂದಾನಂದ ಸ್ವಾಮೀಜಿ ವಿರುದ್ಧ ಆನ್ಲೈನ್ ಮೂಲಕ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಗೋವಿಂದಾನಂದ ಸರಸ್ವತಿ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಕಾನೂನಿನ ಪ್ರಕಾರ ಅವರ ವಿರುದ್ಧ ತನಿಖೆ ಮತ್ತು ಮೊಕದ್ದಮೆ ಹೂಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.


