ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮೃಣಾಲ್ ಒಡೆತನದ ಸಕ್ಕರೆ ಕಾರ್ಖಾನೆಗೆ ಕಾಂಕ್ರೀಟ್ ಮಶಿನ್ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಲಾರಿಗೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ನಡೆದಿದೆ.
ಮೃತ ಯುವಕನನ್ನು ರಮೇಶ್ ಗವಡೆ (30) ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ಇನ್ನಿಬ್ಬರು ಯುವಕರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಪುಡಲಕಲಕಟ್ಟಿ ಗ್ರಾಮದಲ್ಲಿರುವ ‘ಮೃಣಾಲ್ ಶುಗರ್ಸ್’ ಸಕ್ಕರೆ ಕಾರ್ಖಾನೆ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಸೇರಿದ್ದಾಗಿದೆ. ಕಾರ್ಖಾನೆಯ ಕಾಮಗಾರಿಗಾಗಿ ಕಾಂಕ್ರೀಟ್ ಮಶಿನ್ ಸಾಗಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ನಂದಗಡದಿಂದ ಲಾರಿಯ ಮೂಲಕ ಕಾಂಕ್ರೀಟ್ ಮಶಿನ್ ಕಾರ್ಖಾನೆಗೆ ತರಲಾಗುತ್ತಿತ್ತು. ಉಪ್ಪಿನ ಬೆಟಗೇರಿ ಮಾರ್ಗವಾಗಿ ಬರುತ್ತಿದ್ದಾಗ ಮಾರ್ಗಮಧ್ಯೆ ಲಾರಿಗೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿದೆ. ಲಾರಿಗೆ ವೈರ್ ತಗುಲಿದ್ದನ್ನು ಗಮನಿಸಿದ ಯುವಕ, ತೆಗೆಯಲು ಲಾರಿಯ ಹ್ಯಾಂಡಲ್ ಹಿಡಿದ ತಕ್ಷಣ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅಸು ನೀಗಿದ್ದಾನೆ.


