ತುಮಕೂರಿನ ಕುಣಿಗಲ್ ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ಮಠದ ಬಾಲ ಮಂಜುನಾಥಸ್ವಾಮಿಗೆ ಬೆದರಿಕೆ ಹಾಕಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟ ಆರೋಪದಲ್ಲಿ ಯೂಟ್ಯೂಬರ್ ಸುಧೀಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸುಧೀಂದ್ರ ಜನವರಿ 21 ರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಜೂನ್ 28ರಂದು ಮಠದ ಸಿಬ್ಬಂದಿ ಅಭಿಲಾಷ್, ಸುರೇಶ್ ಮತ್ತು ಭಕ್ತರಾದ ಬೀಚನಹಳ್ಳಿ ಕರಿಗೌಡ ಅವರನ್ನು ಸಂಪರ್ಕಿಸಿ ಮಠಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳು ತನಗೆ ಗೊತ್ತಿದ್ದು, ಅವುಗಳನ್ನು ಪ್ರಕಟಿಸಿದರೆ ಮಠದ ಹೆಸರು ಹಾಳಾಗುತ್ತದೆ. ಇದನ್ನು ಪ್ರಸಾರ ಮಾಡದಿರಲು 25 ಲಕ್ಷ ರೂ. ನೀಡುವಂತೆ ಎಂದು ಬೆದರಿಕೆ ಹಾಕಿದ್ದ ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ.
ಹಣ ನೀಡದ ಕಾರಣ ಸುಧೀಂದ್ರ ಯೂಟೂಬ್ ಚಾನಲ್ನಲ್ಲಿ ಪುಣ್ಯ ಕ್ಷೇತ್ರ- ಕ್ಷೇತ್ರ ಪಾಪಿ ಬಾಲ ಮೌಢ್ಯ ಲೀಲೆ- ಭಾಗ-1, ಭಾಗ- 2 ಪ್ರಸಾರ ಮಾಡಿದ್ದಾನೆ. ಇವೆಲ್ಲವೂ ಆಧಾರ ರಹಿತ ಆರೋಪ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಲಮಂಜುನಾಥ ಸ್ವಾಮೀಜಿ ನೀಡಿದ್ದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.