ಧರ್ಮಸ್ಥಳ ಪ್ರಕರಣದ ಕುರಿತು ಎಸ್ ಐಟಿ ರಚನೆ ಆದಾಗ ಮೌನವಾಗಿದ್ದ ಬಿಜೆಪಿಯವರು ಎಸ್ ಐಟಿ ತನಿಖೆ ವೇಳೆ ಏನೂ ಸಿಗದೇ ಇದ್ದಾಗ ಮಾತನಾಡಲು ಆರಂಭಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ಧಾರೆ.
ವಿಧಾನಸಭೆಯಲ್ಲಿ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಬಾರಿಗೆ ಮೌನ ಮುರಿದ ಸಿದ್ದರಾಮಯ್ಯ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರೇ ಎಸ್ ಐಟಿ ರಚನೆ ಸ್ವಾಗತಿಸಿದ್ದಾರೆ. ಆದರೆ ಬಿಜೆಪಿಯವರು ವಿರೋಧಿಸುತ್ತಿದ್ದಾರೆ ಎಂದರು.
ಧರ್ಮಸ್ಥಳ ಬಗ್ಗೆ ಈಗ ಬಿಜೆಪಿಯವರು ಚಳವಳಿ ಮಾಡುತ್ತಿದ್ದಾರೆ. ಧರ್ಮಸ್ಥಳ ತನಿಖೆ ಬಗ್ಗೆ ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ. ಎಸ್ಐಟಿ ರಚನೆ ಮಾಡಿದಾಗ ಬಿಜೆಪಿಗರು ಮಾತನಾಡಲೇ ಇಲ್ಲ. 15 ಜಾಗದಲ್ಲಿ ಅಗೆದು ಎರಡು ಕಡೆ ಮಾತ್ರ ಅಸ್ಥಿಪಂಜರ ಪತ್ತೆಯಾಗಿತ್ತು. 13 ಕಡೆ ಏನೂ ಸಿಗದ ಬಳಿಕ ಬಿಜೆಪಿಯವರು ಮಾತನಾಡಲು ಶುರು ಮಾಡಿದ್ದಾರೆ ಎಂದು ಹೇಳಿದರು.
ಗೃಹ ಸಚಿವ ಪರಮೇಶ್ವರ್ ಕೂಡ ಯಾವುದೇ ಸಂಖ್ಯೆ ಹೇಳದೇ ಜಾರಿಕೊಂಡಿದ್ದರೂ ಈಗ ಸಿಎಂ ಎರಡು ಕಡೆ ಸಿಕ್ಕಿದೆ, 13 ಕಡೆ ಸಿಕ್ಕಿಲ್ಲ ಎಂದು ಅಧಿಕೃತವಾಗಿ ಹೇಳಿದ್ದಾರೆ. ಆದರೆ ಸಿಎಂ ತನಿಖೆಯ ಸಾರಾಂಶದ ಬಗ್ಗೆ ಯಾವುದೇ ವಿವರಣೆ ನೀಡಲಿಲ್ಲ.