ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಮತ್ತು ಸಹಚರರ ವಿರುದ್ಧ 64ನೇ ಸೆಷನ್ಸ್ ಕೋರ್ಟ್ನಲ್ಲಿ ಈ ಕೇಸ್ಗೆ ಸಂಬಂಧಿಸಿದಂತೆ ವಿಚಾರಣೆಯನ್ನು ನ್ಯಾಯಾಧೀಶ ಐ.ಪಿ.ನಾಯ್ಕ್ ಸೆಪ್ಟೆಂಬರ್ 9ಕ್ಕೆ ಮುಂದೂಡಿದ್ದಾರೆ.
ವಿಚಾರಣೆಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಹಾಜರಾಗಿದ್ದರು. ಕಳೆದ ವಿಚಾರಣೆಯಲ್ಲಿ ಕೆಲವು ಆರೋಪಿಗಳು ಗೈರಾಗಿದ್ದರು. ಆರೋಪಿಗಳ ಮೇಲೆ ಯಾವ ಸೆಕ್ಷನ್ಗಳಡಿ ದೋಷಾರೋಪಣೆ ಮಾಡಲಾಗುವುದು ಎಂಬುದನ್ನು ಕೋರ್ಟ್ ಘೋಷಿಸುವ ಪ್ರಕ್ರಿಯೆ ಫ್ರೇಮ್ ಚಾರ್ಜ್ ಹಿನ್ನೆಲೆ ಸೆಕ್ಷನ್ಗಳ ಕುರಿತು ಮುಂದಿನ ವಿಚಾರಣೆಯಲ್ಲಿ ವಾದ-ವಿವಾದ ನಡೆಯಲಿದೆ.
ಮತ್ತೊಂದೆಡೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಮೇಲ್ಮನವಿಯ ವಿಚಾರಣೆ ನಡೆದಿದ್ದು, ಆದೇಶವನ್ನು ಕಾಯ್ದಿರಿಸಲಾಗಿದೆ. ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಟ್ರಯಲ್ ಆರಂಭದ ಕುರಿತು ಪ್ರಶ್ನಿಸಿತ್ತು. ಸರ್ಕಾರದ ಪರ ವಕೀಲರು ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದರು. ಇಂದಿನ ವಿಚಾರಣೆಯಲ್ಲಿ ಟ್ರಯಲ್ ದಿನಾಂಕ ನಿಗದಿಯಾಗದೆ ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ. ಸೆಷನ್ಸ್ ಕೋರ್ಟ್ನಲ್ಲಿ ಟ್ರಯಲ್ ಆರಂಭದ ಒತ್ತಡವಿದ್ದರೆ, ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಆದೇಶದ ಕುರಿತು ಆರೋಪಿಗಳಿಗೆ ಟೆನ್ಷನ್ ಹೆಚ್ಚಿಸಿದೆ.