ನವದೆಹಲಿ: ಬೀದಿನಾಯಿಗಳ ದಾಳಿ ಪ್ರಕರಣಗಳು ಮಿತಿಮೀರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಅವುಗಳ ಸಂತಾನಹರಣ ಮಾಡಿ ಇಲ್ಲವೇ ವಸತಿ ಪ್ರದೇಶದಿಂದ ಸ್ಥಳಾಂತರ ಮಾಡಿ ಎಂದು ಸೂಚನೆ ನೀಡಿದೆ.
ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಾಧವನ್ ನೇತೃತ್ವದ ವಿಭಾಗೀಯ ಪೀಠ ಸೋಮವಾರ ಮಹತ್ವದ ಆದೇಶ ನೀಡಿದ್ದು, ದೆಹಲಿಯ ವಸತಿ ಬಡಾವಣೆಗಳಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಸ್ಥಳಾಂತರಿಸಬೇಕು. ಇದಕ್ಕೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಅಡ್ಡಿಪಡಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿತು.
ಬೀದಿನಾಯಿಗಳ ದಾಳಿಯಿಂದ ಮಕ್ಕಳು ಹಾಗೂ ವೃದ್ಧರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದ್ದು, ಇದರಿಂದ ಜೀವಕ್ಕೆ ಹಾನಿಯಾಗುವ ಹಂತಕ್ಕೆ ತಲುಪಿದೆ. ಇದಕ್ಕೆ ಕಡಿವಾಣ ಹಾಕದೇ ಇದ್ದರೆ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ ಎಂದು ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದರು.
ಬೀದಿ ನಾಯಿಗಳ ಹಾವಳಿಯಿಂದ ಜನರು ರ್ಯಾಬಿಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಬೀದಿಗಳ ಹಾವಳಿ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಾದ ಮತ್ತು ಅರ್ಜಿಯನ್ನು ಮಾತ್ರ ವಿಚಾರಣೆಗೆ ಅಂಗೀಕರಿಸಲಾಗುವುದು. ಇದನ್ನು ಹೊರತುಪಡಿಸಿ ಯಾವುದೇ ಸಂಘಟನೆ ಮತ್ತು ವ್ಯಕ್ತಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಈ ಆದೇಶ ನೀಡುತ್ತಿರುವುದು ನಮಗಾಗಿ ಅಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ನೀಡಲಾಗಿದೆ. ಇದರಲ್ಲಿ ಯಾವುದೇ ಭಾವನೆಗಳಿಗೆ ಅವಕಾಶವಿಲ್ಲ. ಈ ಆದೇಶವನ್ನು ಸಂಬಂಧಪಟ್ಟ ಇಲಾಖೆಗಳು ಶೀಘ್ರದಲ್ಲೇ ಜಾರಿಗೆ ತರಬೇಕು ಎಂದು ಅವರು ಆದೇಶಿಸಿದರು.