ಧರ್ಮಸ್ಥಳದಲ್ಲಿ 1986 ರಲ್ಲಿ ಅಸಹಜವಾಗಿ ಮೃತರಾಗಿದ್ದ ಬೋಳಿಯಾರುವಿನ ಪದ್ಮಲತಾ ಪ್ರಕರಣದ ಮರು ತನಿಖೆ ಕೋರಿ ಅವರ ಕುಟುಂಬದವರು ಎಸ್ಐಟಿ ಗೆ ಮನವಿ ಸಲ್ಲಿಸಿದ್ದು, ಮತ್ತೊಬ್ಬ ದೂರುದಾರ ಜಯಂತ್ ಮನವಿ ಮಾಡಿದ್ದಾರೆ.
ಪದ್ಮಲತಾ ಸಾವಿಗೆ ಸಿಐಡಿ ತನಿಖೆಯಲ್ಲಿ ನ್ಯಾಯ ಸಿಕ್ಕಿಲ್ಲ, ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸಬೇಕು ಎಂದು ವಿಶೇಷ ತನಿಖಾ ತಂಡವನ್ನು ಅವರು ಆಗ್ರಹಿಸಿದ್ದಾರೆ. ಅಗತ್ಯವಿದ್ದಲ್ಲಿ ನನ್ನ ಬಳಿ ಇರುವ ಸಾಕ್ಷಿಗಳನ್ನು ಎಸ್ಐಟಿಗೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ಪದ್ಮಲತಾ ಅಪಹರಣ ಆಗಿರುವುದು ಸತ್ಯ. ಈ ಬಗ್ಗೆ ಯಾರು ತನಿಖೆ ನಡೆಸಿದ್ದರು, ಯಾರು ಅಪಹರಣ ಮತ್ತು ಕೊಲೆ ಮಾಡಿದ್ದರು ಎಂಬುದನ್ನು ಎಸ್ಐಟಿ ತನಿಖೆ ಮಾಡಬೇಕಿದೆ. ನಾನು ಈ ಪ್ರಕರಣದ ಎರಡನೇ ದೂರುದಾರ. ದೂರು ನೀಡಿದಾಗಿನಿಂದಲೂ ನನ್ನನ್ನು ಹಲವರು ಹಿಂಬಾಲಿಸುತ್ತಿದ್ದು, ನನಗೆ ಜೀವಭಯವಿದೆ. ನಾನು ಹೆದರುವುದಿಲ್ಲ, ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಹೇಳಿದರು.ಸಿಐಡಿ ತನಿಖೆ ಸರಿಯಾಗಿ ನಡೆದಿಲ್ಲ: ಪದ್ಮಲತಾ ಪ್ರಕರಣ ಆಗ ಸರಿಯಾಗಿ ತನಿಖೆಯಾಗಿಲ್ಲ. ಸಿಐಡಿ ಸರಿಯಾಗಿ ತನಿಖೆ ನಡೆಸಿಲ್ಲ. ಪದ್ಮಲತಾ ನಮ್ಮ ಸಂಬಂಧಿ, ಅವರ ಅಕ್ಕ ಕೂಡ ಎಸ್ಐಟಿಗೆ ದೂರು ನೀಡಿದ್ದಾರೆ. ಎಸ್ಐಟಿ ಮೇಲೆ ನಮಗೆ ನಂಬಿಕೆ ಇದೆ ಮತ್ತು ಸತ್ಯ ಹೊರಬರುತ್ತದೆ ಎಂಬ ವಿಶ್ವಾಸವೂ ಇದೆ ಎಂದು ಜಯಂತ್ ತಿಳಿಸಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿದ ಜಯಂತ್, ನನ್ನಲ್ಲಿ ಸಾಕ್ಷ್ಯ ಇದೆ, ಎಸ್ಐಟಿಗೆ ನೀಡುತ್ತೇನೆ. ಅವರು ಅದನ್ನು ಮಾಧ್ಯಮದವರಿಗೆ ಕೊಡಲಿ ಎಂದು ಹೇಳಿದರೆ ಕೊಡುತ್ತೇನೆ. ನನ್ನ ಆರೋಪ ಸುಳ್ಳು ಎಂದು ಯಾರಾದರೂ ಹೇಳಿದರೆ ನನ್ನ ಮೇಲೆ ಕೇಸ್ ಹಾಕಲಿ. ನಾನು ಯಾವುದೇ ಮುಖವಾಡ ಹಾಕುವುದಿಲ್ಲ, ಯಾವುದಕ್ಕೂ ಭಯಪಡುವುದಿಲ್ಲ ಎಂದು ಜಯಂತ್ ಹೇಳಿದ್ದಾರೆ.
ಎಸ್ಐಟಿ ಅಧಿಕಾರಿಗಳು ದೂರು ಸ್ವೀಕರಿಸದಿದ್ದರೆ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 1986 ರ ಡಿಸೆಂಬರ್ 22 ರಂದು ಕಾಣೆಯಾಗಿದ್ದ ಪದ್ಮಲತಾ 56 ದಿನಗಳ ಬಳಿಕ 1987ರಲ್ಲಿ ಅಸಹಜ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳ ಪ್ರಕರಣ ಸಂಬಂಧ ಎಸ್ಐಟಿ ಈಗಾಗಲೇ ತನಿಖಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.