ರೂರ್ಕೆಲಾ (ಒಡಿಶಾ): 2030ರ ವೇಳೆಗೆ ಭಾರತವು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಸಾಮರ್ಥ್ಯವನ್ನು ತಲುಪುತ್ತದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದರು.
ಇಲ್ಲಿನ ರೊರ್ಕೆಲಾ ಉಕ್ಕು ಸ್ಥಾವಕ್ಕೆ ಭೇಟಿಯ ನಂತರ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿಪಡಿಸಿರುವ ಈ ಗುರಿಯನ್ನು ಮುಟ್ಟಲು ರೊರ್ಕೆಲಾ ಉಕ್ಕು ಸ್ಥಾವರದ (ಆರ್ಎಸ್ಪಿ) ವಿಸ್ತರಣೆ ಮತ್ತು ಉಕ್ಕು ಕ್ಷೇತ್ರದ ವ್ಯಾಪಕ ಅಭಿವೃದ್ಧಿಗೆ ಒಡಿಶಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದರು.
ರಾಷ್ಟ್ರದ ಅಭಿವೃದ್ಧಿಯ ಬೆನ್ನೆಲುಬಾಗಿರುವ ಉಕ್ಕು ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಮೋದಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಉಕ್ಕು ಉತ್ಪಾದನೆಯ ಮುಂಚೂಣಿ ರಾಜ್ಯಗಳಲ್ಲಿ ಒಂದಾದ ಒಡಿಶಾ ಸರ್ಕಾರವೂ ಕೇಂದ್ರಕ್ಕೆ ಎಲ್ಲಾ ಸಹಕಾರವನ್ನು ನೀಡಲಿದೆ. ಈ ಬಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಜತೆ ನಡೆಸಿರುವ ಮಾತುಕತೆ ಫಲಪ್ರಧವಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರನ್ನು ಬುಧವಾರ ಭುವನೇಶ್ವರದಲ್ಲಿ ಭೇಟಿ ಭೇಟಿ ಮಾಡಿ, ರಾಜ್ಯದಲ್ಲಿನ ಉಕ್ಕು ಸಂಬಂಧಿತ ಅಭಿವೃದ್ಧಿ, ವಿಶೇಷವಾಗಿ ರೂರ್ಕೆಲಾ ಉಕ್ಕು ಸ್ಥಾವರದ ಕಾರ್ಯಾಚರಣೆಗಳು ಮತ್ತು ವಿಸ್ತರಣೆ ಯೋಜನೆಗಳ ಬಗ್ಗೆ ವಿವರವಾದ ಮಾತುಕತೆ, ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ ಒಡಿಶಾ ರಾಜ್ಯದವರೇ ಆದ ಕೇಂದ್ರದ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಜುಯಲ್ ಓರಾಮ್ ಕೂಡ ಹಾಜರಿದ್ದರು.
ಈ ಮಾತುಕತೆಯನ್ನು “ಅತ್ಯಂತ ಫಲಪ್ರದ” ಎಂದು ಬಣ್ಣಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಪ್ರಮುಖ ಉಕ್ಕು ಮತ್ತು ಗಣಿಗಾರಿಕೆ ಕೇಂದ್ರವಾಗಿ ಒಡಿಶಾದ ಸ್ಥಾನವನ್ನು ಬಲಪಡಿಸುವ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿದ್ದವು. ಉಕ್ಕು ಸಚಿವಾಲಯ ಮತ್ತು ಒಡಿಶಾ ಸರ್ಕಾರದ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು ಎಂಬುದಾಗಿ ಮಾಹಿತಿ ನೀಡಿದರು.
ಮಾತುಕತೆಗಳು ಮೂರು ಪ್ರಮುಖ ಕ್ಷೇತ್ರಗಳ ಬಗ್ಗೆ ಕೇಂದ್ರೀಕೃತವಾಗಿದ್ದವು ಎಂದ ಸಚಿವರು; “ರೂರ್ಕೆಲಾ ಉಕ್ಕು ಸ್ಥಾವರದ ಕಾರ್ಯನಿರ್ವಹಣೆ, ಸೌಲಭ್ಯದ ಯೋಜಿತ ವಿಸ್ತರಣೆ ಮತ್ತು ಒಡಿಶಾದಲ್ಲಿ ಉಕ್ಕು ಮತ್ತು ಗಣಿಗಾರಿಕೆ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ನಾವು ಚರ್ಚಿಸಿದ್ದೇವೆ” ಎಂದರು.
ಶ್ರೀಮಂತ ಖನಿಜ ಸಂಪನ್ಮೂಲಗಳು ಮತ್ತು ಬಲವಾದ ಕೈಗಾರಿಕಾ ನೆಲೆಯನ್ನು ಹೊಂದಿರುವ ಒಡಿಶಾ ರಾಜ್ಯವು ಭಾರತದ ಉಕ್ಕಿನ ಬೆಳವಣಿಗೆಯ ಕಾರ್ಯತಂತ್ರಕ್ಕೆ ಅತ್ಯಗತ್ಯ ಆಧಾರಸ್ತಂಭವಾಗಿ ಉಳಿದಿದೆ ಎಂದು ಕೇಂದ್ರದ ಉಕ್ಕು ಸಚಿವರು ಒತ್ತಿ ಹೇಳಿದರು.
ರೋರ್ಕೆಲಾ ಸ್ಥಾವರದ ವಿಸ್ತರಣೆ ಮತ್ತು ಉಕ್ಕಿನ ಕ್ಷೇತ್ರದ ವ್ಯಾಪಕ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. “2030 ರ ವೇಳೆಗೆ 300 ಮಿಲಿಯನ್ ಟನ್ ಉಕ್ಕಿನ ಸಾಮರ್ಥ್ಯವನ್ನು ತಲುಪುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಸಾಧಿಸಲು ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು” ಎಂದು ಸಚಿವರು ತಿಳಿಸಿದರು.


