Menu

15 ದಿನದಲ್ಲಿ ಕೇಂದ್ರದಿಂದ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಸರಬರಾಜಿಗೆ ಕ್ರಮ: ಬಸವರಾಜ ಬೊಮ್ಮಾಯಿ

basavaraj bommai

ದೆಹಲಿ: ಹತ್ತು ಹದಿನೈದು ದಿನಗಳಲ್ಲಿ ಕರ್ನಾಟಕಕ್ಕೆ ಅಗತ್ಯವಿರುವ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ಪೂರೈಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ನವ ದೆಹಲಿಯಲ್ಲಿ ಇಂದು ರಾಜ್ಯದ ಬಿಜೆಪಿ ಸಂಸದರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ರೈತರಿಗೆ ಸಕಾಲಕ್ಕೆ ಯುರಿಯಾ ಗೊಬ್ಬರ ಸಿಗುತ್ರಿಲ್ಲ. ಇದು ದಿಡೀರ್ ಉದ್ಭವಿಸಿದ ಸಮಸ್ಯೆ ಅಲ್ಲ. ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆ ಈ ವರ್ಷ ಚನ್ನಾಗಿ ಬಂದಿರುವುದರಿಂದ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ ಎಂದರು.

ಮೆಕ್ಕೆ ಜೋಳ ಬಿತ್ತನೆ ಪ್ರದೇಶ ಈ ವರ್ಷ ಶೇ 1.5 ರಷ್ಟು ಹೆಚ್ಚಳವಾಗಿದೆ. ಅಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿರುವುದು ಕೃಷಿ ಇಲಾಖೆಗೆ ಗೊತ್ತಿದೆ. ಅದನ್ನು ಇಲಾಖೆ ಒಪ್ಪಿಕೊಂಡಿದೆ. ಸಾಮಾನ್ಯವಾಗಿ ಯುರಿಯಾ ಬಹಳ ಬೇಡಿಕೆ ಜುಲೈ ನಿಂದ ಪ್ರಾರಂಭವಾಗಿ ಆಗಸ್ಟ್ ವರೆಗೂ ಇರುತ್ತದೆ. ಆದರೆ, ಸಮಯಕ್ಕೆ ಸರಿಯಾಗಿ ಮಳೆ ಆಗಿರುವುದರಿಂದ ಜೂನ್ ಮೂರನೇ ವಾರದಿಂದಲೇ ಗೊಬ್ಬರದ ಬೇಡಿಕೆ ಪ್ರಾರಂಭವಾಗಿದೆ ಎಂದರು.

ಸಾಮಾನ್ಯವಾಗಿ ರೈತರು ಒಂದು ಬಾರಿ ಯೂರಿಯಾ ಗೊಬ್ಬರ ಹಾಕುತ್ತಾರೆ. ಆದರೆ, ಈ ಬಾರಿ ಒಂದು ಸಾರಿ ಹಾಕಿದ ನಂತರ ಮಳೆಯಾಗಿ ಮತ್ತೊಂದು ಸಾರಿ ಹಾಕಿದಾಗಲೂ ಮಳೆಯಾಗಿ ಮೂರು ಬಾರಿ ಗೊಬ್ಬರ ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಪದೇ ಪದೇ ಯುರಿಯಾ ಹಾಕುವುದರಿಂದ ರೈತರಿಗೆ ಅರ್ಥಿಕ ಸಂಕಷ್ಟ ಬಂದೊದಗಿದೆ. ಅದಲ್ಲದೇ ಗೋವಿನ ಜೋಳದಲ್ಲಿ ಕಸ ಬೆಳೆದಿದ್ದರಿಂದ ಕೂಲಿ ಕಾರ್ಮಿಕರ ಕೊರತೆಯಿಂದ ಅದಕ್ಕೂ ಔಷಧ ಹೊಡೆಯುವ ಪರಿಸ್ಥಿತಿ ಬಂದಿದೆ. ಇದರಿಂದ ರೈತರಿಗೆ ಸಾಕಷ್ಟು ಆರ್ಥಿಕ ಹೊರೆಯಾಗುತ್ತಿದೆ. ಇದರ ಹೊರತಾಗಿ ಗೊಬ್ಬರ ಡೀಲರ್ ಅಂಗಡಿಗಳ ಮುಂದೆ ಹಗಲು ರಾತ್ರಿ ನಿಲ್ಲುವುದರಿಂದ ಬಹಳ ಕ್ಷೋಭೆ ಉಂಟಾಗಿದೆ ಇದರಿಂದ ರೈತರು ಬಹಳ ಉಗ್ರವಾಗಿ ಪ್ರತಿಭಟಿಸಿದ್ದಾರೆ. ಈ ಸಮಸ್ಯೆ ಸುಮಾರು ಎಂಟತ್ತು ಜಿಲ್ಲೆಗಳಲ್ಲಿ ತೀರ್ವವಾಗಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಸಾಮಾಮ್ಯವಾಗಿದೆ ಎಂದರು.

ಕೃಷಿ ಇಲಾಖೆ ವಿಫಲ

ಕೃಷಿ ಇಲಾಖೆ ಹವಾಮಾನದಲ್ಲಿ ಆಗಿರುವ ಬದಾವಣೆಯನ್ನು ತಿಳಿದುಕೊಂಡು ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕಿತ್ತು. ಕಳೆದ ವರ್ಷ ಎಷ್ಟು ಗೊಬ್ಬರ ಬಳಕೆಯಾಗಿತ್ತು ಅದನ್ನು ಲೆಕ್ಕ ಹಾಕಿ ಈ ವರ್ಷದ ಅಗತ್ಯತೆಯನ್ನು ಅರಿತುಕೊಂಡು ಶೇಖರಣೆ ಮಾಡಿಟ್ಟುಕೊಳ್ಳಬೇಕಿತ್ತು. ಕೇಂದ್ರ ಸರ್ಕಾರ ಒದಗಿಸಿರುವ ಗೊಬ್ಬರವನ್ನು ಹಂಚುವ ಕೆಲಸ ರಾಜ್ಯ ಸರ್ಕಾರದ್ದು, ಕೇಂದ್ರ ಸರ್ಕಾರ ಗೊಬ್ಬರವನ್ನೂ ರೈಲ್ಬೆ ವ್ಯಾಗನ್ ಕೊಟ್ಟು ಹತ್ತಿರದ ಯಾರ್ಡ್ ವರೆಗೂ ಎಲ್ಲ ಜವಾಬ್ದಾರಿ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಅಲ್ಲಿಂದ ರಾಜ್ಯ ಸರ್ಕಾರ ವಿತರಣೆ ಮಾಡಬೇಕು. ಗೊಬ್ಬರ ವಿತರಣೆಯಲ್ಲಿ ಅವ್ಯವಸ್ಥೆ ಆಗಿದೆ. ಕೃಷಿ ಇಲಾಖೆ ರೈತರ ಅಂದಾಜು ಬೇಡಿಕೆಯನ್ನು ಅರಿತುಕೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರ

ರಾಜ್ಯದಲ್ಲಿ ಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.‌ ಕರ್ನಾಟಕದಲ್ಲಿ ಗೊಬ್ಬರ ಇದೆ. ಆದರೆ, ರೈತರಿಗೆ ಸಿಗುತ್ತಿಲ್ಲ. ಶ್ರೀಮಂತ ರೈತರು ಹೆಚ್ಚುವರಿ ದುಡ್ಡು ಕೊಟ್ಟು ಗೊಬ್ಬರ ಖರಿದಿಸುತ್ತಿದ್ದಾರೆ. ಆದರೆ, ಸಣ್ಣ ಮತ್ತು ಅತಿ ಸಣ್ಣ ರೈತರು ಅಂಗಡಿಗಳ ಮುಂದೆ ಗೊಬ್ಬರಕ್ಕಾಗಿ ಸಾಲಿನಲ್ಲಿ ನಿಂತಿದ್ದಾರೆ. ಅನಧಿಕೃತವಾಗಿ ಗೊಬ್ಬರ ದಾಸ್ತಾನು ಮಾಡಿ, ಕಾಳ ಸಂತೆ ಮೂಲಕ ಹೆಚ್ಚುವರಿ ದರಕ್ಕೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಬೇಡಿಕೆ ಇದೆ ಎನ್ನುವ ಮಾಹಿತಿ ಅಧಿಕಾರಿಗಳಿಗಿಲ್ಲ. ಆಡಳಿತದ ಅವ್ಯವಸ್ಥೆಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ ಎಂದರು.

ಲಿಂಕ್ ಮಾರಾಟ ತಡೆಯಬೇಕು

ಕರ್ನಾಟಕದಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ತುರ್ತಾಗಿ ರೈತರಿಗೆ ಬೇಕಾಗಿರುವ ಗೊಬ್ಬರದ ಸಮಸ್ಯೆಗೆ ಪರಿಹಾರ ಸಿಗಲಿದೆ. ರಾಜ್ಯ ಸರ್ಕಾರ ಸೊಸೈಟಿಗಳ ಮೂಲಕ ರೈತರಿಗೆ ಹಂಚಬೇಕು. ಬೇರೆ ಗೊಬ್ಬರ ತೆಗೆದುಕೊಂಡರೆ ಮಾತ್ರ ಯೂರಿಯಾ ಗೊಬ್ಬರ ಕೊಡುತ್ತೇವೆ ಎಂದು ಯಾವುದೇ ರೀತಿಯ ಒತ್ತಡ ಮಾಡಬಾರದು ಎಂದು ಕೇಂದ್ರ ಸರ್ಕಾರದ ಆದೇಶ ಇದೆ. ಆ ರೀತಿ ಬೇರೆ ಗೊಬ್ಬರದ ಲಿಂಕ್ ಮಾಡಿ ಮಾರಾಟ ಮಾಡುವವರ ಪರವಾನಗಿ ರದ್ದು ಪಡೆಸುವಂತೆ‌ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಅವರ ಮೇಲೆ ಮತ್ತೊಂದು ಹೊರೆ ಹಾಕುತ್ತಿದೆ. ರಾಜ್ಯ ಸರ್ಕಾರ ಯಾವುದೇ ಬೇರೆ ಗೊಬ್ಬರದ ಲಿಂಕ್ ಮಾಡದೇ ರೈತರಿಗೆ ಯೂರಿಯಾ ಗೊಬ್ಬರ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

Related Posts

Leave a Reply

Your email address will not be published. Required fields are marked *