ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಗಳ ಅಡಿ ನೋಂದಾಯಿತ ಉದ್ದಿಮೆಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಋತುಚಕ್ರ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ನೀತಿ ಜಾರಿಗೆ ಬೆಂಬಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶ್ರಿ ಡಿ ಕೆ ಶಿವಕುಮಾರ್ ಹಾಗೂ ಸಚಿವ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ರಾಜ್ಯದ ಮಹಿಳಾ ಉದ್ಯೋಗಿಗಳ ಆರೋಗ್ಯ ರಕ್ಷಣೆಯ ಜೊತೆಗೆ ಅವರ ಮನೋಸ್ಥೈರ್ಯವನ್ನು ಬಲಗೊಳಿಸುವ ಉದ್ದೇಶದಿಂದ ಋತುಚಕ್ರ ರಜೆ ನೀತಿಯನ್ನು ಜಾರಿಗೊಳಿಸಿ, ಆದೇಶ ಹೊರಡಿಸಲಾಗಿದೆ. ಈ ಮೂಲಕ ಮಹಿಳಾ ಸಬಲೀಕರಣದ ಹಾದಿಯಲ್ಲಿ ನಮ್ಮ ಸರ್ಕಾರ ಇಡೀ ದೇಶಕ್ಕೇ ಮಾದರಿಯಾದ ಹೆಜ್ಜೆ ಇರಿಸಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಋತುಚಕ್ರ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ಕಲ್ಪಿಸುವ ಸಂಬಂಧ ಸರ್ಕಾರ ಈಗಾಗಲೇ ಅಧಿಕೃತ ಆದೇಶ ಪ್ರಕಟಸಿದೆ. ಋತುಚಕ್ರ ರಜೆ ನೀತಿ – 2025ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಅಂಕಿತ ದೊರೆತಿತ್ತು.
ಈ ಹಿಂದೆ ಕಾರ್ಮಿಕ ಇಲಾಖೆಯು ಮಾಸಿಕ ಋತುಸ್ರಾವದ ರಜೆ ನೀತಿಗಾಗಿ ಆಡಳಿತಾತ್ಮಕ ಅನುಮೋದನೆ ಕೋರಿತ್ತು. ಆದರೆ ಈ ನೀತಿಯನ್ನು ಸಮಗ್ರವಾಗಿ ಜಾರಿಗೆ ತರಬೇಕು ಎಂದು ಬಯಸಿ ನಿರಂತರ ಸಭೆ, ಚರ್ಚೆ ಮತ್ತು ಸಂವಾದಗಳಿಗೆ ವೇದಿಕೆ ಒದಗಿಸಿದ್ದರು. ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರದ ರಜೆ ಸಂಬಂಧ. ಸರ್ಕಾರ ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ನಾ ಎಸ್ ಅವರ ಅಧ್ಯಕ್ಷತೆಯ 18 ಸದಸ್ಯರ ಸಮಿತಿ ನೇಮಿಸಲಾಗಿತ್ತು. ಈ ಸಮಿತಿ ಕೂಡ ವರದಿ ಸಲ್ಲಿಸಿತ್ತು. ಋತುಚಕ್ರದ ಆರೋಗ್ಯವನ್ನು ಮಹಿಳೆಯರ ಹಕ್ಕುಗಳು ಮತ್ತು ಕೆಲಸದ ಸ್ಥಳದ ಕಲ್ಯಾಣದ ಅಂಶವೆಂದು ಪರಿಗಣಿಸಿ, ಅಂತಿಮವಾಗಿ ಸಚಿವ ಸಂಪುಟದ ಅನುಮೋದನೆ ನೀಡಿತ್ತು ಎಂದು ಸಚಿವರು ವಿವರಿಸಿದ್ದಾರೆ.
ಋತುಚಕ್ರದ ರಜೆ ಸೌಲಭ್ಯ ಜಾರಿಯಾಗುವುದಲ್ಲಿ ಸಾಕಷ್ಪಟು ಪರಿಶ್ರಮ ವಹಿಸಲಾಗಿದೆ. ಮಹಿಳಾ ಕಾರ್ಮಿಕರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಕಾರ್ಮಿಕ ಇಲಾಖೆಯ ಮೂಲಕ ರೂಪಿಸಲಾಗಿದೆ. ದೇಶದ ಬೇರೆ ಬೇರೆ ರಾಜ್ಯ ಮತ್ತು ದೇಶಗಳಲ್ಲಿ ಋತುಚಕ್ರ ರಜೆ ನೀತಿಗಳನ್ನೆಲ್ಲ ಕೂಲಂಕಷವಾಗಿ ಅಧ್ಯಯನದ ನಂತರ ರಾಜ್ಯದಲ್ಲೂ ಈ ನೀತಿ ಸಮರ್ಪಕವಾಗಿ ಜಾರಿಗೆ ಬರುವಂತೆ ನೋಡಿಕೊಂಡಿರುವುದಾಗಿ ಲಾಡ್ ತಿಳಿಸಿದ್ದಾರೆ.
ಋತುಸ್ರಾವದ ರಜೆಗೆ ಸಚಿವ ಸಂಪುಟ ಅನುಮೋದನೆ ನೀಡಿದಾಗಲೇ ಮಹಿಳಾ ಉದ್ಯೋಗಿಗಳು ಧನ್ಯವಾದಗಳನ್ನು ತಿಳಿಸಿದ್ದ್ದದು, ಕಾರ್ಮಿಕ ಇಲಾಖೆಯ ಈ ವಿಶಿಷ್ಟ ಕೊಡುಗೆ ಬಗ್ಗೆ ರಾಜ್ಯದ ಎಲ್ಲ ಮಹಿಳಾ ವರ್ಗವು ಪ್ರಶಂಸೆ ವ್ಯಕ್ತಪಡಿಸಿದೆ. ಮಹಿಳಾ ಉದ್ಯೋಗಿಗಳ ಪಾಲಿನ ಬಹುದಿನದ ಅತ್ಯಗತ್ಯ ಬೇಡಿಕೆಗೆ ಸರ್ಕಾರ, ಮಹಿಳೆಯರ ಆರೋಗ್ಯ ಕುರಿತ ಕಾಳಜಿ ಹಾಗೂ ಸಬಲೀಕರಣದ ನಿಟ್ಟಿನಲ್ಲಿ ಇನ್ನೊಂದು ಮಹತ್ವದ ಮತ್ತು ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವುದು ಕೇವಲ ಮಹಿಳಾ ಉದ್ಯೋಗಿಗಳಿಗೆ ಅಲ್ಲದೆ ಅವರ ಕುಟುಂಬದ ಸದಸ್ಯರಲ್ಲೂ ಸಂತೋಷ ಮೂಡಿಸಿದೆ.


