ಬೆಂಗಳೂರು: ಸಾರ್ವಜನಿಕ ಅಭಿಪ್ರಾಯ ರೂಪಿಸುವ ಶಕ್ತಿ ಮಾಧ್ಯಮಗಳಿಗಿದ್ದು, ಈ ಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಘಟಕದ ಉದ್ಘಾಟನೆ ಹಾಗೂ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೋಮು ಘರ್ಷಣೆ, ಜಾತಿ, ಜನಾಂಗೀಯ ಸಂಘರ್ಷವೇ ಮೊದಲಾದ ಸೂಕ್ಷ್ಮ ವಿಚಾರಗಳ ವರದಿಗಾರಿಕೆಯಲ್ಲಿ ಮಾಧ್ಯಮಗಳು ಸೂಕ್ಷ್ಮ ಸಂವೇದನೆ ಹೊಂದಿರಬೇಕು. ಪ್ರಚೋದನಕಾರಿಯಾದ ವರದಿಗೆ ಕಡಿವಾಣ ಹಾಕಬೇಕು ಎಂದರು.
ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗವನ್ನು ಒಳಗೊಂಡಿದ್ದೆ ನಮ್ಮ ಆಡಳಿತ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಪತ್ರಿಕಾಂಗ ಅಥವಾ ಮಾಧ್ಯಮ ರಂಗಕ್ಕೆ ಮಹತ್ವದ ಸ್ಥಾನ ನೀಡಲಾಗಿದ್ದು, ಸಮಾಜದ ನಾಲ್ಕನೇ ಅಂಗ ಎಂದೂ ಪರಿಗಣಿಸಲಾಗಿದೆ ಎಂದರು.
ಅನಕ್ಷರತೆಯ ನಡುವೆಯೂ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಪತ್ರಿಕೆಗಳು ನಿರ್ವಹಿಸಿದ ಪಾತ್ರ ಅತ್ಯಂತ ಮಹತ್ವವಾದ್ದು. ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚುವಲ್ಲಿ ದೇಶಪ್ರೇಮ ಮೂಡಿಸುವಲ್ಲಿ ಮಹಾತ್ಮಾ ಗಾಂಧೀ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಬಾಲ ಗಂಗಾಧರ ತಿಲಕರೇ ಮೊದಲಾದವರು ಹೊರತರುತ್ತಿದ್ದ ಪತ್ರಿಕೆಗಳ ಕೊಡುಗೆ ಅನನ್ಯವಾದ್ದು ಎಂದರು.
ಭಾರತದಲ್ಲಿ 1780ರಲ್ಲಿ ಆರಂಭವಾದ ಮೊದಲ ಪತ್ರಿಕೆ ‘ದಿ ಬೆಂಗಾಲ್ ಗೆಜೆಟ್’ ಹೀಗಾಗಿ ಭಾರತೀಯ ಪತ್ರಿಕೋದ್ಯಮಕ್ಕೆ 245 ವರ್ಷಗಳ ಸುದೀರ್ಘ ಇತಿಹಾಸ ಇದೆ. ಅದೇ ರೀತಿ ಮಂಗಳೂರು ಸಮಾಚಾರ ಪತ್ರಿಕೆ 1843 ಜುಲೈ 1ರಂದು ಆರಂಭವಾಗಿದ್ದು, ಕನ್ನಡ ಪತ್ರಿಕೋದ್ಯಮಕ್ಕೆ 182ವರ್ಷಗಳ ಭವ್ಯ ಇತಿಹಾಸ ಇದೆ ಎಂದರು.
ಕನ್ನಡ ಪತ್ರಿಕೋದ್ಯಮಕ್ಕೆ ತಿ.ತಾ. ಶರ್ಮಾ, ಮೊಹರೆ ಹಣಮಂತರಾಯರು, ಖಾದ್ರಿ ಶಾಮಣ್ಣನವರು, ಆರ್.ಆರ್. ದಿವಾಕರ್ ಮೊದಲಾದವರು ಕೊಡುಗೆ ನೀಡಿದ್ದಾರೆ ಎಂದ ಅವರು, ಲೇಖನಿ ಖಡ್ಗಕ್ಕಿಂತ ಹರಿತ. ಆದರೆ ಆ ಹರಿತವಾದ ಲೇಖನಿಯನ್ನು ಸಮರ್ಪಕ ರೀತಿಯಲ್ಲಿ ಬಳಸುವುದು ಅಗತ್ಯ ಎಂದು ತಿಳಿಸಿದರು.
ಮಾಧ್ಯಮಗಳು ಜನ ಜಾಗೃತಿ ಮೂಡಿಸಬೇಕು:
ನೀರಲ್ಲಿ ಕರಗದ ಪ್ಲಾಸ್ಟರಾಫ್ ಪ್ಯಾರೀಸ್ (ಪಿಓಪಿ) ಗಣಪತಿ ಮೂರ್ತಿಗಳನ್ನು ನೀರಲ್ಲಿ ವಿಸರ್ಜನೆ ಮಾಡುವುದನ್ನು ಹಾಗೂ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ ಅವುಗಳ ಬಳಕೆ ವ್ಯಾಪಕವಾಗಿದೆ. ಪರಿಸರಕ್ಕೆ ಮಾರಕವಾದ ಇಂತಹ ವಸ್ತುಗಳ ಬಳಕೆ ತ್ಯಜಿಸುವಂತೆ ಮಾಧ್ಯಮಗಳು ಜನಜಾಗೃತಿ ಮೂಡಿಸಬೇಕು ಎಂದರು.
11 ಕೋಟಿ ಸಸಿ ನೆಟ್ಟ ಸಾಧನೆ:
ಅರಣ್ಯ ಇಲಾಖೆಯ ಜವಾಬ್ದಾರಿಯನ್ನು ತಾವು ವಹಿಸಿಕೊಂಡ ಬಳಿಕ 2.3 ವರ್ಷಗಳಲ್ಲಿ ರಾಜ್ಯದಲ್ಲಿ 11ಕೋಟಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿರುವುದಾಗಿ ಅವರು ತಿಳಿಸಿದರು.
ಮಾಧ್ಯಮಶ್ರೀ ಮತ್ತು ಜೀವಮಾನ ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮತ್ತಿತರರು ಭಾಗಿಯಾಗಿದ್ದರು.