ಡಿಸಿಎಂ ಡಿಕೆ ಶಿವಕುಮಾರ್ ಅವರ ತವರು ಕ್ಷೇತ್ರದ ರಾಮನಗರದಲ್ಲಿ ತಡರಾತ್ರಿ ಲೋಕಾಯುಕ್ತ ದಾಳಿ ನಡೆದಿದ್ದು, ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ತಂಗರಾಜ್, ಗ್ರಾಮ ಲೆಕ್ಕಾಧಿಕಾರಿ ಚಂದ್ರೇಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸರ್ಕಾರಿ ನೌಕರರ ಸಂಘದ ಕಚೇರಿ ಮೇಲೆ ಸಾರ್ವಜನಿಕರ ದೂರಿನ ಮೇರೆಗೆ ಲೋಕಾಯುಕ್ತ ದಾಳಿ ನಡೆದಿದೆ. ಡಿ ವೈ ಎಸ್ಪಿ ಶಿವಪ್ರಸಾದ್ ನೇತೃತ್ವದಲ್ಲಿ ಸಿಪಿಐ ಸಂದೀಪ್ ಕುಮಾರ್ ಹಾಗೂ ವಿಜಯ್ ಕುಮಾರ್ ದಾಳಿ ಮಾಡಿ ಹಲವು ಕಡತಗಳ ಪರಿಶೀಲನೆ ಮಾಡಿ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲೋಕಾಯುಕ್ತ ಸಿಬ್ಬಂದಿ ಲಕ್ಷ್ಮೀ,ಸೌಮ್ಯ,ಭಾಗ್ಯಮ್ಮ, ವಸಂತ,ರಮ್ಯಾ,ರಘು,ವೆಂಕಟೇಶ್,ವಸಂತ ಹಾಗೂ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಲೋಕಾಯುಕ್ತ ವಶದಲ್ಲಿ ಇರುವ ಆರೋಪಿಗಳ ವಿಚಾರಣೆ ಮುಂದುವರಿದಿದೆ.
ಭಟ್ಕಳದಲ್ಲಿ ವಂಚಕರ ಬಂಧನ
ಡಿಸ್ಕೌಂಟ್ ಆಮಿಷ ತೋರಿಸಿ 300 ಜನರಿಗೆ ವಂಚಿಸಿರುವ ಪ್ರಕರಣದಲ್ಲಿ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಎಮ್.ಗಣೇಶನ್ (52), ಸೌತ್ ಸ್ಟ್ರೀಟ್ ರಾಜಾಮಡಂ ನ ತ್ಯಾಗರಾಜನ್ (65) , ಅನಸಾಲ ಸ್ಟ್ರೀಟ್ ನ ಮೈಯನಾದನ್(42) ಬಂಧಿತ ಆರೋಪಿಗಳು.
ಭಟ್ಕಳ ನಗರದಲ್ಲಿ ‘ಗ್ಲೋಬಲ್ ಎಂಟರ್ ಪ್ರೈಸಸ್’ ಎಂಬ ಹೆಸರಿನ ಮಳಿಗೆ ತೆರೆದು, 10 ರಿಂದ 40 ರಷ್ಟು ಡಿಸ್ಕೌಂಟ್ ನೀಡುವುದಾಗಿ ಆಕರ್ಷಕ ಆಮಿಷ ಪ್ರಕಟಿಸಿದ್ದ ಆರೋಪಿಗಳು ಮುನ್ನೂರಕ್ಕೂ ಹೆಚ್ಚು ಗ್ರಾಹಕರಿಂದ ಮುಂಗಡ ಹಣವಾಗಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದರು. ಶಾಪ್ ಬಂದ್ ಮಾಡಿ ಎಸ್ಕೇಪ್ ಆಗಿದ್ದರು.
ವಂಚನೆ ಪ್ರಕರಣ ಸಂಬಂಧ ಪಟ್ಟಣದ ನಿವಾಸಿ ಮಹ್ಮದ್ ಸವೂದ್ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಭಟ್ಕಳ ಶಹರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.


