ಮಣಿಪುರದಲ್ಲಿ ಹೇರಲಾಗಿರುವ ರಾಷ್ಟ್ರಪತಿ ಆಳ್ವಿಕೆಯನ್ನು ಆಗಸ್ಟ್ 13ರಿಂದ ಇನ್ನೂ ಆರು ತಿಂಗಳು ವಿಸ್ತರಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ವಿಸ್ತರಣೆಗೆ ಪ್ರಸ್ತಾವನೆ ಮಂಡಿಸಿದ್ದು, ಸದನವು ಅಂಗೀಕರಿಸಿದೆ.
2023ರ ಮೇ 3ರಿಂದ ಭುಗಿಲೆದ್ದಿರುವ ಜನಾಂಗೀಯ ಹಿಂಸಾಚಾರದಿಂದಾಗಿ ರಾಜ್ಯದ ಆಡಳಿತ ವ್ಯವಸ್ಥೆ ಕುಸಿದಿರುವ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ರಾಜೀನಾಮೆ ಬಳಿಕ ರಾಷ್ಟ್ರಪತಿ ಆಳ್ವಿಕೆಯನ್ನು ಫೆಬ್ರವರಿ 13ರಂದು ಜಾರಿಗೊಳಿಸಲಾಯಿತು.
2023ರ ಮೇ 3ರಂದು ಮಣಿಪುರದಲ್ಲಿ ಕುಕಿ-ಜೊ ಮತ್ತು ಮೈತೈ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ಭುಗಿಲೆದ್ದಿತು, ಮಣಿಪುರ ಹೈಕೋರ್ಟ್ನ ಆದೇಶದ ವಿರುದ್ಧ ನಡೆದ ‘ಜನಜಾತಿ ಒಗ್ಗಟ್ಟಿನ ಮೆರವಣಿಗೆ’ ವೇಳೆ ಹಿಂಸಾಚಾರದಿಂದಾಗಿ 250ಕ್ಕೂ ಹೆಚ್ಚು ಜನ ಮೃತಪಟ್ಟರೆ 60,000ಕ್ಕೂ ಅಧಿಕ ಜನ ಮನೆಗಳನ್ನು ತೊರೆದರು.
2022 ಮತ್ತು 2023ರಲ್ಲಿ ಸಿಎಂ ಎನ್. ಬಿರೇನ್ ಸಿಂಗ್ ಮೀಸಲು ಅರಣ್ಯ ಪ್ರದೇಶಗಳು ಮತ್ತು ಸರ್ಕಾರಿ ಭೂಮಿಯ ಅತಿಕ್ರಮಣದ ವಿರುದ್ಧ ತೆರವು ಕಾರ್ಯಾಚರಣೆ ನಡೆಸಿದ್ದರು, ಇದು ಕುಕಿ ಮತ್ತು ಜೊ ಸಮುದಾಯಗಳ ಕ ಆಂದೋಲನಕ್ಕೆ ಕಾರಣವಾಯಿತು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿತು.