Menu

ತಾಲೂಕು ಆಸ್ಪತ್ರೆಗಳಲ್ಲಿ 24/7 ಕಾರ್ಯನಿರ್ವಹಣೆ ಜಾರಿಗೆ  ಸರ್ಕಾರದ ಚಿಂತನೆ: ಸಚಿವ ದಿನೇಶ್ ಗುಂಡುರಾವ್

dinesh gindurao

ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳು ನಿರಂತರ 24/7 ಕಾರ್ಯನಿರ್ವಹಿಸುವಂತೆ ಮಾಡಲು ಸರ್ಕಾರದ ಚಿಂತನೆ ನಡೆಸಿದೆ. ಜೊತೆಗೆ ಗುಣಮಟ್ಟದ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸರ್ಕಾರದ ಆದ್ಯತೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದಾರೆ.

ಗದಗ ತಾಲೂಕು  ಆಸ್ಪತ್ರೆ (ನೂತನ ಸ್ಥಳದ ಆವರಣ) ವರವಿ ರೋಡ ಶಿರಹಟ್ಟಿಯಲ್ಲಿ  ನಬಾರ್ಡ್‌ ಯೋಜನೆಯಡಿ 100 ಹಾಸಿಗೆಗಳ ತಾಲೂಕು ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ಸಮಾರಂಭ ಹಾಗೂ ಮುಂಡರಗಿ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಬಿಪಿಎಚ್ಯು ಲ್ಯಾಬ್‌ ಹಾಗೂ ಲಕ್ಷೇಶ್ವರ ತಾಲೂಕ ಬಾಲೇಹೊಸೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿ ವಸತಿ ಗೃಹ ಉದ್ಘಾಟನೆ,  ಗೃಹ ಆರೋಗ್ಯ ಯೋಜನೆಗೆ ಚಾಲನೆ ಹಾಗೂ ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಅವರು  ಮಾತನಾಡಿದರು.

ಶಿರಹಟ್ಟಿ ತಾಲೂಕಿನಲ್ಲಿ ನೂತನ ತಾಲೂಕು  ಆಸ್ಪತ್ರೆ ನಿರ್ಮಾಣ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆ ನಿರ್ಮಾಣ ಮಾಡುವುದೇ ನಮ್ಮ ಗುರಿಯಾಗಿದೆ. ರಾಜ್ಯದ ಹಳೇ ತಾಲೂಕುಗಳನ್ನು ಗುರುತಿಸಿ 100 ಬೆಡ್ ಆಸ್ಪತ್ರೆ ವ್ಯವಸ್ಥೆ ಇರುವ ತಾಲೂಕ ಆಸ್ಪತ್ರೆ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಒಂದೊಂದು ಆಸ್ಪತ್ರೆಗೆ 30 ರಿಂದ 40 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಎಲ್ಲ ಅತ್ಯಾಧುನಿಕ ಸುಸಜ್ಜಿತ ಸೌಲಭ್ಯಗಳನ್ನು ಆಸ್ಪತ್ರೆ ಒಳಗೊಳ್ಳಲಿದೆ. ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಿ  ನಾವೇ ಆಸ್ಪತ್ರೆಯನ್ನು ಉದ್ಘಾಟಿಸುತ್ತೇವೆ ಎಂದು ಭರವಸೆ ನೀಡಿದರು.

ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡಿದ್ದೇವೆ. ಇತ್ತಿಚೆಗೆ ಕ್ಯಾನ್ಸರ್, ನರರೋಗ, ಚರ್ಮರೋಗ, ಪಾಶ್ಚವಾಯು ಸೇರಿದಂತೆ ಹಲವು ರೋಗಗಳು ಹೆಚ್ಚುತ್ತಿವೆ. ಆಶಾ ಕಾರ್ಯಕರ್ತರು, ವೈದ್ಯರು, ಸಿಬ್ಬಂದಿ ಭಾಗವಹಿಸಿ ಈ ರೋಗಗಳನ್ನು ಪತ್ತೆ ಹಚ್ಚುವುದಕ್ಕಾಗಿ ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡಿದ್ದೇವೆ. ಈ ಯೋಜನೆ ಮೂಲಕ ಶಾಶ್ವತವಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಅನೇಕ ರೋಗಗಳನ್ನು ನಿರ್ಮೂಲನೆ ಮಾಡಬಹುದಾಗಿದೆ ಎಂದರು.

ತಾಯಿ ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ತಾಲೂಕಿನಲ್ಲಿ 24/7 ನಿರಂತರ ಕಾರ್ಯನಿರ್ವಹಿಸಲು ಯೋಜನೆ ರೂಪಿಸಲಾಗುವುದು. ತಾಲೂಕುಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಜಿಲ್ಲಾಸ್ಪತ್ರೆಯಲ್ಲಿ ಸಿಗುವ ಸೌಲಭ್ಯ ತಾಲೂಕು ಆಸ್ಪತ್ರೆಯಲ್ಲಿ ಸಿಗುವ ವ್ಯವಸ್ಥೆಯನ್ನು ಹಂತ-ಹಂತವಾಗಿ ಮಾಡಲಾಗುವುದು. ಜನರ ಆರೋಗ್ಯ ಉತ್ತಮವಾಗಿರಬೇಕು ಎನ್ನುವುದೇ ನಮ್ಮ ಉದ್ದೇಶವಾಗಿದೆ. ಈಗಾಗಲೇ ಲಕ್ಷ್ಮೇಶ್ವರದ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆಯ ಮೇಲ್ದರ್ಜೆಗೆರಿಸಿ 5 ಕೋಟಿ ಅನುದಾನ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ ಪಾಟೀಲ ಮಾತನಾಡಿ, ರಾಷ್ಟ್ರದಲ್ಲೇ ಮೊದಲ ಬಾರಿಗೆ ಬಡತನವನ್ನು ಬೇರು ಮಟ್ಟದಿಂದ ಕಿತ್ತೊಗೆಯಲಾಗಿದೆ. ಒಂದು ಬಡ ಕುಟುಂಬಕ್ಕೆ ಪ್ರತಿ ತಿಂಗಳು ಕನಿಷ್ಠ 5 ಸಾವಿರ ರೂ ನೀಡುವ ಕೇಲಸವನ್ನು ರಾಜ್ಯ ಸರ್ಕಾರ ಶೇ. 99% ಮಾಡಿದೆ. ಇದು ಕ್ರಾಂತಿಕಾರಿ ನಿರ್ಣಯವಾಗಿದೆ. ಮನೆ-ಮನೆಗೆ ಹೋಗಿ ಆರೋಗ್ಯ ವಿಚಾರಿಸುವ ಮಹತ್ವದ ಯೋಜನೆ ಗೃಹ ಆರೋಗ್ಯ ಯೋಜನೆಯಾಗಿದೆ. ದೀರ್ಘ ಕಾಲದ ಕಾಯಿಲೆಗಳಿಗೆ ಜೀವಾತಾವಧಿಯ ಕೊನೆಯವರೆಗೂ ಓಷಧಿ ನೀಡುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಇದು ನಮ್ಮ ಸರ್ಕಾರದ ಬದ್ದತೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್. ಎಸ್ ನೀಲಗುಂದ  ಮಾತನಾಡಿ, ಆಗಸ್ಟ್‌  14 ರಿಂದ ಗೃಹ ಆರೋಗ್ಯ ಕಾರ್ಯಕ್ರಮ ನಡೆಸಲು ರಾಜ್ಯ ಸರ್ಕಾರ ತಿರ್ಮಾನಿಸಿದೆ. ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿ ಪ್ರತಿ ಮನೆ-ಮನೆಗೆ ತೆರಳಿ 30 ವರ್ಷ ಮೇಲ್ಪಟ್ಟವರಿಗೆ ಕಿಡ್ನಿ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಆರೋಗ್ಯದಲ್ಲಿ ಸಮಸ್ಯೆ ಇದ್ದಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ. ಚಂದ್ರು ಕೆ ಲಮಾಣಿ ವಹಿಸಿದ್ದರು. ಮುಂಡರಗಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಶಿರಹಟ್ಟ ಪಟ್ಟಣ ಪಂಚಾಯತ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಬಾಲೆಹೊಸುವ ಗ್ರಾ ಪಂ ಅಧ್ಯಕ್ಷೆ ಚನ್ನವ್ವ ಮೈಲಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ, ತಾಲೂಕಿನ ಅಧ್ಯಕ್ಷರಾದ ವೀರಯ್ಯ ಮಠಪತಿ, ನಾಗರಾಜ ಮಡಿವಾಳರ, ಅಶೋಕ ಮಂದಾಲಿ, ಮಾಜಿ ಶಾಸಕ ರಾಮಣ್ಣ, ಮಾಜಿ ಸಂಸದ ಐ ಜಿ ಸನದಿ, ಸುಜಾತಾ ದೊಡ್ಡಮನಿ, ಸಿ. ಸಿ ನೂರಶೇಟ್ಟರ, ನಾಗರಾಜ ಲಕ್ಕುಂಡಿ, ದೀಪಕ್ ಕಪ್ಪತ್ತನವರ, ಆನಂದಸ್ವಾಮಿ ಗಡ್ಡದೇವರಮಠ, ಹುಮಾಯಾನ್ ಮಾಗಡಿ, ಜಾನು ಲಮಾಣಿ, ನಾಗರಾಜ ಲಕ್ಕುಂಡಿ ಸೇರಿದಂತೆ ಜಿಲ್ಲಾಧಿಕಾರಿ ಸಿ ಎನ್‌ ಶ್ರೀಧರ, ಸಿಇಒ ಭರತ್ ಎಸ್, ಎಸ್ಪಿ ರೋಹನ್ ಜಗದೀಶ್, ಆರೋಗ್ಯ ಇಲಾಖೆ ನಿರ್ದೇಶಕ ವಸಂತಕುಮಾರ್ ಕೆ, ಡಿಎಸ್ಒ ಡಾ. ವೆಂಕಟೇಶ ರಾಠೋಡ್ ಅನೇಕರು ಉಪಸ್ಥಿತರಿದ್ದರು.

1954 ರಿಂದ ಶಿರಹಟ್ಟಿ ತಾಲೂಕ ಕೇಂದ್ರವಾಗಿದೆ. ಆದರೆ, ದೊಡ್ಡ ತಾಲೂಕು ಆಸ್ಪತ್ರೆ ಇರಲಿಲ್ಲ. ಇದರಿಂದ ವೈದ್ಯರು ಇಕ್ಕಟ್ಟಿನ ಜಾಗದಲ್ಲಿ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇತ್ತು. ಈಗ ಒಳ್ಳೆಯ ದಿನ ಕೂಡಿ ಬಂದಿದ್ದು, ದೊಡ್ಡ ಆಸ್ಪತ್ರೆ ನಿರ್ಮಾಣ ಆಗುತ್ತಿರುವುದು ಸಂತೋಷದ ವಿಷಯವಾಗಿದೆ. ಬೆಳ್ಳಟ್ಟಿ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆಗುವ ಅವಶ್ಯಕತೆ ಇದೆ. ಮುಂಡರಗಿ ಆಸ್ಪತ್ರೆ ಸಿಬ್ಬಂದಿಗೆ ವಸತಿ ಗ್ರಹಗಳ ಅವಶ್ಯಕತೆ ಇದ್ದು, ಶೀಘ್ರದಲ್ಲೇ ನಿರ್ಮಿಸುವ ಭರವಸೆಯನ್ನು ಆರೋಗ್ಯ ಸಚಿವರು ನೀಡಿದ್ದಾರೆ ಎಂದು ಶಾಸಕ  ಡಾ. ಚಂದ್ರು ಕೆ. ಲಮಾಣಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *