ವಿಜಯಪುರ: ಕೇಂದ್ರ ಸರ್ಕಾರ ನಿಗದಿ ಮಾಡಿದ ದರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ರಾಜ್ಯ ಸರ್ಕಾರ ಮಾಡಲಿದೆ ಎಂದು ಸಕ್ಕರೆ ಮತ್ತು ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಜಿಲ್ಲೆಗೆ ದರ ಏರಿಳಿತವಾಗಲಿದೆ. ಭೀಮಾ ನದಿ ಪಾತ್ರದಲ್ಲಿ ಇಳುವರಿ ಕಡಿಮೆ, ಕೃಷ್ಣಾ ಕಣಿವೆಯಲ್ಲಿ ಸ್ವಲ್ಪ ಇಳುವರಿ ಹೆಚ್ಚು, ಕಾವೇರಿ ಭಾಗದಲ್ಲಿಯೇ ಬೇರೆ. ಹೀಗಾಗಿ ರೈತರು ಮತ್ತು ಕಾರ್ಖಾನೆಗಳ ಮಾಲೀಕರು ಸಹಕಾರದ ಮೇರೆಗೆ ದರ ನಿಗದಿಯಾಗಬೇಕು ಎಂದರು.
ಸಾಲ ತೆಗೆದುಕೊಂಡು ಕಾರ್ಖಾನೆ ನಡೆಸುವವರಿಗೆ ಸಂಕಷ್ಟವಿದೆ. ಅಂಥ ಕಾರ್ಖಾನೆಗಳ ಬಗ್ಗೆಯೂ ಗಮನವಿದೆ. ನಮ್ಮ ಮೊದಲ ಆದ್ಯತೆ ರೈತರೇ ಆಗಿರುತ್ತಾರೆ. ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆ ಗೆ ಮುನ್ನುಡಿ ಬರೆಯಲಾಗಿದೆ ಎಂದು ಅವರು ಹೇಳಿದರು.
ಕಬ್ಬು ಕಡಿಯುವ ಗ್ಯಾಂಗ್ ರಾಜ್ಯಕ್ಕೆ ಬಂದು ಹತ್ತು ದಿನ ಆಯಿತು. ಕಾರಾವಾರ, ಬಾಗಲಕೋಟೆ ಮತ್ತಿತರ ಭಾಗದಲ್ಲಿ ಕಾರ್ಖಾನೆಗಳು ಕಾರ್ಯಾರಂಭವಾಗಿವೆ. ಬೆಳಗಾವಿಯಲ್ಲಿ ಡಿಸಿ ಸಭೆ ಮಾಡಿದಾಗ ನಗೆ ಹರಿಯುವ ಹಂತ ಇತ್ತು. ರಾಜೀವ ಶೆಟ್ಟಿ ಅವರು ಸಹ ಬಂದು ಮಾರ್ಗದರ್ಶನ ಮಾಡಬಹುದು. ಅವರು ಹೆಚ್ಚಿಗೆ ಕೊಡುವ ಭರವಸೆ ನೀಡಿದ್ದು ಅದನ್ನೇ ತಲೆಯಲ್ಲಿ ಇರಿಸಿಕೊಂಡಿದ್ದಾರೆ ಎಂದು ಅವರು ನುಡಿದರು.
ರೈತರು 3400 ರೂಪಾಯಿ ಕೇಳಿದರೆ ಕಾರ್ಖಾನೆಗಳು 3200 ರೂಪಾಯಿ ಕೊಡುವುದಾಗಿ ಭರವಸೆ ನೀಡಿವೆ. ಹೀಗಾಗಿ ರೈತರು ಹೊಂದಾಣಿಕೆ ಮೂಲಕ ಸರಿಪಡಿಸಿಕೊಳ್ಳಬೇಕು. ಸಾಮರಸ್ಯದಿಂದ ಆಗಬೇಕು. ನಾಲ್ಕು ಗೋಡೆ ಮಧ್ಯೆ ಚರ್ಚೆ ಯಾಗಬೇಕು. ಬೀದಿಗೆ ಬಂದರೆ ಸ್ವಲ್ಪ ಸಮಸ್ಯೆಯಾಗಲಿದೆ ಎಂದು ಸಚಿವರು ಸಲಹೆ ನೀಡಿದರು.
ಸ್ವಲ್ಪ ದಿನ ದೂಡಿದರೆ ಸಂಪೂರ್ಣ ಇಳುವರಿ ಕಡಿಮೆಯಾಗುತ್ತದೆ. ಇದರಿಂದ ರೈತರಿಗೇ ಸಮಸ್ಯೆಯಾಗಲಿದೆ. ಹೀಗಾಗಿ ಸಹಕರಿಸಬೇಕು. ಒಂದು ಕಾಲದಲ್ಲಿ 700 ರೂಪಾಯಿಗೂ ಕಬ್ಬು ತೆಗೆದುಕೊಳ್ಳುವವರಿಲ್ಲ, ಈಗ ಕನಿಷ್ಠ 3000 ಆದರೂ ಸಿಗುತ್ತಿದೆ. ಬಹಳ ಬೆಳೆಗೆ ಸೂಕ್ತ ಬೆಲೆ ಇಲ್ಲ. ಇರುವುದು ಕಬ್ಬಿಗೆ ಮಾತ್ರ ದರ. ಅದನ್ನು ಕಾಯ್ದುಕೊಂಡು ಹೋಗಬೇಕಿದೆ ಎಂದರು.
ನಿರಾಣಿ ಅವರೇ ಅಮಿತ್ ಷಾಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದಲ್ಲಿ ಏನೆಲ್ಲಾ ಆಗಿಲ್ಲ ಎಂಬುದರ ಸಮಗ್ರ ಮಾಹಿತಿ ಇದೆ. ಇಥೆನಾಲ್ ಪ್ರಮೋಟ್ ಮಾಡಿದವರೇ ಕೇಂದ್ರ ಸರ್ಕಾರ. ಅದನ್ನೇ ಕಡಿಮೆ ಮಾಡಿದರೆ ಕಾರ್ಖಾನೆಯವರು ಹೆಚ್ಚಿನ ಬೆಲೆ ಕೊಡುವುದು ಕಷ್ಟವಾಗಲಿದೆ ಎಂದು ಅವರು ನುಡಿದರು.


