ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯ ಗಂಗೊಂಡನಹಳ್ಳಿಯ ಮನೆಯೊಂದಕ್ಕೆ ನುಗ್ಗಿದ ಆರು ದುಷ್ಕರ್ಮಿಗಳು ಅಲ್ಲಿದ್ದ ಗಂಡಸರನ್ನು ಕಟ್ಟಿ ಹಾಕಿ ಥಳಿಸಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
ಗಂಗೊಂಡನಹಳ್ಳಿಯ ಮಾರೇಗೌಡ ಎಂಬವರ ಮನೆಯಲ್ಲಿ ನೇಪಾಳ ಮೂಲದ ಸಂತ್ರಸ್ತೆ ಮತ್ತು ಕುಟುಂಬ ಬಾಡಿಗೆಗೆ ವಾಸವಿದೆ, ಮಧ್ಯರಾತ್ರಿ ಮನೆಗೆ ನುಗ್ಗಿದ ದರೋಡೆಕೋರರು ತಾವು ಪೀಣ್ಯ ಪೊಲೀಸರ ಇನ್ ಫಾರ್ಮರ್ಸ್ ಎಂದು ಹೇಳಿಕೊಂಡಿ ದ್ದಾರೆ. ನಿಮ್ಮ ಮನೆಯಲ್ಲಿ ಗಾಂಜಾ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಬೆದರಿಸಿದೆ. ಮಾರಕಾಸ್ತ್ರಗಳನ್ನು ತೋರಿಸಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತೆಯ 14 ವರ್ಷದ ಮಗ ಹಾಗೂ ಸ್ನೇಹಿತೆಯ ಮೇಲೂ ಹಲ್ಲೆ ಮಾಡಿ ದ್ದಾರೆ. ಮನೆಯಲ್ಲಿದ್ದ ಗಂಡಸರನ್ನು ಕಟ್ಟಿ ಹಾಕಿ ಥಳಿಸಿ ಮೂವರು ಮಹಿಳೆಯನ್ನು ಪಕ್ಕದ ಮನೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಉಳಿದ ಮೂವರು ಮನೆಯಲ್ಲಿದ್ದ ಹಣ ಮತ್ತು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ.
ಸಂತ್ರಸ್ತೆಯ 14 ವರ್ಷದ ಮಗ ಧೈರ್ಯ ಮಾಡಿ ಪೊಲೀಸ್ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಗ್ಯಾಂಗ್ ರೇಪ್ ಮತ್ತು ದರೋಡೆ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಕರಣದ ತನಿಖೆಗಾಗಿ ನೆಲಮಂಗಲ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಲಾಗಿದೆ. ಕೃತ್ಯ ಎಸಗಿದ ಮಿಥುನ್, ನವೀನ್, ಕಾರ್ತಿಕ್, ಗ್ರೇನ್ ಸುಯೋಗ್, ಸೀನ, ಜಂಗ್ಲಿ ಪೃಥ್ವಿ 7 ಜನ ಆರೋಪಿಗಳಲ್ಲಿ 6 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮಿಥುನ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಎಲ್ಲ ಆರೋಪಿಗಳು ಸಂತ್ರಸ್ತೆ ವಾಸವಿದ್ದ ಮನೆಯಿಂದ ಸ್ವಲ್ಪ ದೂರದಲ್ಲಿ ವಾಸವಾಗಿದ್ದವರು ಎಂದು ತಿಳಿದುಬಂದಿದೆ.


