ಬಹಿರಂಗ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಅವಮಾನ ಆಗಿದೆ ಎಂದು ಬೇಸರಿಸಿಕೊಂಡು ಸ್ವಯಂ ನಿವೃತ್ತಿಗೆ ಮುಂದಾಗಿದ್ದ ಧಾರವಾಡ ಎಎಸ್ಪಿ ನಾರಾಯಣ ಭರಮನಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈ ಮೂಲಕ ನಾರಾಯಣ ಬರಮನಿ ಪ್ರಕರಣದಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಸರ್ಕಾರ ನಿಟ್ಟುಸಿರು ಬಿಡುವಂತಾಗಿದೆ. ನಾರಾಯಣ ಬರಮನಿ ಕೆಲಸಕ್ಕೆ ಹಾಜರಾಗಿದ್ದು, ಅವರ ಸ್ವಯಂ ನಿವೃತ್ತಿ ಮನವಿಯನ್ನು ಸರ್ಕಾರ ಅನುಮೋದಿಸಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಪರಮೇಶ್ವರ್ ಮನವೊಲಿಕೆಯ ನಂತರ ನಾರಾಯಣ ಬರಮನಿ ಕೆಲಸಕ್ಕೆ ಹಾಜರಾಗಿದ್ದಾರೆ.
ಸ್ವಯಂ ನಿವೃತ್ತಿ ಮನವಿಗೆ ಸೋಮವಾರ ಅಂತಿಮ ಗಡುವು ಆಗಿತ್ತು. ಸರ್ಕಾರ ಈಗ ವಿಆರ್ಎಸ್ ಮನವಿಯನ್ನು ಅನುಮೋದಿಸದ ಕಾರಣ ಇನ್ನೂ ಮೂರು ವರ್ಷ ನಾರಾಯಣ ಬರಮನಿ ಸೇವೆ ಸಲ್ಲಿಸಲಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ ನಾರಾಯಣ ಬರಮನಿ ಅವರನ್ನು ವೇದಿಕೆಗೆ ಕರೆಸಿದ್ದ ಸಿಎಂ, ಪ್ರತಿಭಟನಾಕಾರರಿಗೆ ಯಾಕೆ ಅವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿ ಹೊಡೆಯಲು ಕೈಎತ್ತಿದ್ದರು. ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾದ ನಂತರ ಬರಮನಿ ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ್ದರು.