ರಾಜ್ಯದಲ್ಲಿ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಟ ಬಂದ್ ಆಗಿದೆ. ಅನ್ನಭಾಗ್ಯ ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿಗಳಿಗೆ ಸರ್ಕಾರ ನೀಡಬೇಕಾಗಿದ್ದ ಹಣವನ್ನು ಪಾವತಿಸಿಲ್ಲ. ಆಹಾರ ಧಾನ್ಯ ಸಾಗಾಣಿಕೆ ವೆಚ್ಚವನ್ನು ಸರ್ಕಾರ ಬಾಕಿ ಉಳಿಸಿಕೊಂಡಿರುವುದೇ ಇದಕ್ಕೆ ಕಾರಣ. ಬಾಕಿ ಇದ್ದ ಸಾಗಾಣಿಕೆ ವೆಚ್ಚ ನೀಡುವಂತೆ ರಾಜ್ಯ ಸರ್ಕಾರಕ್ಕೆ ಲಾರಿ ಮಾಲೀಕರ ಸಂಘ 15 ದಿನ ಗಡುವು ನೀಡಿತ್ತು. ಸರ್ಕಾರ ಸ್ಪಂದಿಸದ ಕಾರಣ ಅನ್ನಭಾಗ್ಯ ಆಹಾರ ಸಾಗಿಸುವ ಲಾರಿಗಳ ಸಂಚಾರ ಬಂದ್ ಮಾಡಲಾಗಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಮಹತ್ವದ ಅನ್ನಭಾಗ್ಯ ಯೋಜನೆಯ ಅಕ್ಕಿ ಮುಂದಿನ ತಿಂಗಳಿನಿಂದ ಫಲಾನುಭವಿಗಳಿಗೆ ಸಿಗುವ ಬಗ್ಗೆ ಅನುಮಾನಗಳಿವೆ, ಅನ್ನಭಾಗ್ಯ ಆಹಾರ ಧಾನ್ಯ ಸಾಗಾಟ ಮಾಡುವ ಲಾರಿಗಳಿಗೆ ಪಾವತಿ ಮಾಡಬೇಕಿದ್ದ 250 ಕೋಟಿ ರೂ. ಸರ್ಕಾರ ಬಾಕಿ ಇರಿಸಿಕೊಂಡಿದೆ. ಅದನ್ನು ಪಾವತಿಸದಿದ್ದರೆ ಸಾಗಾಟಕ್ಕೆ ಲಾರಿಗಳು ಲಭ್ಯವಾಗುವುದಿಲ್ಲ ಎನ್ನಲಾಗಿದೆ.
ಅನ್ನಭಾಗ್ಯದ ಯೋಜನೆಗೆ ಸರ್ಕಾರವೇ ಕನ್ನ ಹಾಕುತ್ತಿದೆ, ಅಕ್ಕಿ ನೀಡುವ ಬದಲು ಇಂದಿರಾ ಕಿಟ್ ನೀಡಿ ಅನ್ನಭಾಗ್ಯ ದುಡ್ಡು ಉಳಿಸಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ರಸ್ತೆ ಬೇಕಾ ಅನ್ನಭಾಗ್ಯದ ಅಕ್ಕಿ ಬೇಕಾ ಎಂದು ಕೇಳಿದ್ದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ಖಂಡಿಸಿ ವಿಜಯೇಂದ್ರ ಕಿಡಿ ಕಾರಿದ್ದಾರೆ.