ನಟ ಅಲ್ಲು ಅರ್ಜುನ್ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ. ರಾಮಕೃಷ್ಣ ಎಲೆಕ್ಟ್ರಾನಿಕ್ಸ್ ಬ್ಯಾಂಕ್ನಿಂದ 101.4 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ 3 ಗಂಟೆಗಳ ವಿಚಾರಣೆ ನಡೆಸಲಾಗಿದೆ.
ಈ ಹಿಂದೆ ಅವರು ವಿಚಾರಣೆಗೆ ಹಾಜರಾಗಿದ್ದಾಗ ಪ್ರಮುಖ ಹಣಕಾಸಿನ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದರು. ಮತ್ತೆ ವಿಚಾರಣೆಗೆ ಅಲ್ಲು ಅರವಿಂದ್ ಹಾಜರಾಗಿದ್ದು, ಮುಂದಿನ ವಾರ ಮತ್ತೆ ವಿಚಾರಣೆಗೆ ಬರುವಂತೆ ಇಡಿ ಸೂಚಿಸಿದೆ. ವಿಚಾರಣೆ ಬಳಿಕ ಮಾತಾಡಿದ ಅಲ್ಲು ಅರವಿಂದ್, 2017ರಲ್ಲಿ ಮೈನರ್ ಷೇರುದಾರನಾಗಿ ಒಂದು ಆಸ್ತಿ ಖರೀದಿಸಿದ್ದೆ. ಆಸ್ತಿ ವಿಚಾರವಾಗಿ ತನಿಖೆ ಇದೆ ಎಂದು ತಿಳಿದಿರಲಿಲ್ಲ. ಬ್ಯಾಂಕ್ ಸಾಲವನ್ನು ಪಾವತಿಸಲಿಲ್ಲ. ಅಕೌಂಟ್ಸ್ ಬುಕ್ನಲ್ಲಿ ನನ್ನ ಹೆಸರು ಇರುವುದರಿಂದ ಇಡಿ ವಿಚಾರಣೆಗೆ ಕರೆದಿತ್ತು. ಜವಾಬ್ದಾರಿಯುತ ನಾಗರಿಕನಾಗಿ ಹಾಜರಾಗಿ ವಿವರಣೆಯನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.
ಒಪನ್ ಕ್ಯಾಶ್ ಕ್ರೆಡಿಟ್ ಸೌಲಭ್ಯವನ್ನು ದುರ್ಬಳಕೆ ಮಾಡಿ, ಅರವಿಂದ್ ಅವರು 101 ಕೋಟಿ ರೂ.ವರೆಗೆ ತಮ್ಮ ವೈಯಕ್ತಿಕ ಖಾತೆಗಳಿಗೆ ಬದಲಾಸಿಕೊಂಡಿದ್ದಾರೆ ಎಂಬ ಆರೋಪ ಇದೆ. 2018-19ರಲ್ಲಿ ಈ ಬ್ಯಾಂಕ್ ವಂಚನೆ ನಡೆದಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿತ್ತು.