ವಿದ್ಯಾರಣ್ಯಪುರ ಬಳಿ ನಡೆದ ಎರಡು ಕೋಟಿ ದರೋಡೆ ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ನಾಲ್ವರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಬಂಧಿತರಿಂದ 15 ಲಕ್ಷ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ಎರಡು ಕೋಟಿ ದರೋಡೆ ಪ್ರಕರಣದ ಹಿಂದೆ ದೊಡ್ಡ ಜಾಲದ ಕೈವಾಡವಿದ್ದು, ಮನಿ ಟ್ರೇಡಿಂಗ್ ಹೆಸರಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.
ಎರಡು ವಿಶೇಷ ತಂಡ ರಚನೆ ಮಾಡಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ತನಿಖೆ ವೇಳೆ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ವಿಚಾರ ಬೆಳಕಿಗೆ ಬಂದಿದೆ.
ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಪ್ಲಾನ್ ಇರುವುದು ಗೊತ್ತಾಗಿದೆ. ಇದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಉದ್ಯಮಿ ಹರ್ಷನ ಬಳಿ ಎರಡು ಕೋಟಿ ರೂ. ಹೇಗೆ ಯಾರಿಂದ ಬಂದಿದೆ, ದಾಖಲೆಗಳು ಇವೆಯಾ ಎಂಬ ತನಿಖೆ ಕೈಗೊಳ್ಳಲಾಗಿದೆ.
ಬುಧವಾರ ಸಂಜೆ ವಿದ್ಯಾರಣ್ಯಪುರ ಬಳಿಯ ಎಂಎಸ್ ಪಾಳ್ಯದಲ್ಲಿ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಲು ಯತ್ನಿಸುತ್ತಿದ್ದ ಉದ್ಯಮಿ ಹರ್ಷ ಅವರ ಮೇಲೆ ಏಳು ಸದಸ್ಯರ ತಂಡವೊಂದು ದಾಳಿ ಮಾಡಿ 2 ಕೋಟಿ ರೂ. ದೋಚಿದೆ ಎಂದು ವರದಿಯಾಗಿತ್ತು.