ರಾಯಚೂರು ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ ರಾತ್ರಿ ಮಲಗಿದ್ದ ತಾಯಿ ಮತ್ತು ಮಗನಿಗೆ ಹಾವು ಕಚ್ಚಿ ಇಬ್ಬರೂ ಮೃತಪಟ್ಟಿದ್ದಾರೆ.
ಸುಬ್ಬಮ್ಮ (35) ಮತ್ತು ಪುತ್ರ ಬಸವರಾಜ್ (10 ವರ್ಷ) ಮೃತಪಟ್ಟವರು. ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿದೆ. ಮನೆಯವರು ತಾಯಿ ಮತ್ತು ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ ವಾಹನ ತಯಾರಿ ಮಾಡಿಕೊಂಡು ಆಸ್ಪತ್ರೆಗೆ ಹೋಗುವಷ್ಟರಲ್ಲಿ ತಾಯಿ-ಮಗ ಇಬ್ಬರೂ ಮೃತಪಟ್ಟಿದ್ದಾರೆ.
ಹಾವು ಕಚ್ಚಿದಾಗ ಮಲಗಿದ್ದರಿಂದ ತಕ್ಷಣ ಗೊತ್ತಾಗಿಲ್ಲ. ವಿಷ ದೇಹಕ್ಕೆ ಆವರಿಸಿಕೊಂಡ ಬಳಿಕವೇ ಹಾವು ಕಚ್ಚಿರುವುದು ತಿಳಿದಿದೆ. ಹೀಗಾಗಿ ಚಿಕಿತ್ಸೆ ನೀಡುವುದು ಕೂಡ ವಿಳಂಬವಾಗಿದೆ.
ಗ್ರಾಮದಲ್ಲಿ ಇತ್ತೀಚೆಗೆ ಹಾವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಗ್ರಾಮಸ್ಥರು ಎಚ್ಚರಿಕೆಯಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಲಹೆ ನೀಡಿದೆ.