ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ 6 ತಿಂಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಪತಿಯ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ಎಸ್. ಜಯಶ್ರೀ (25) ಆತ್ಮಹತ್ಯೆ ಮಾಡಿಕೊಂಡವರು, ಆರು ತಿಂಗಳ ಹಿಂದೆ ಚಂದ್ರಶೇಖರ್ ಎಂಬವರ ಜೊತೆ ಮದುವೆಯಾಗಿತ್ತು.
ಶಿಡ್ಲಘಟ್ಟ ಕೊಂಡಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಮತ್ತು ಜಯಶ್ರೀ ವಿವಾಹದ ಬಳಿಕ ಚೆನ್ನಾಗಿಯೇ ಇದ್ದರು, ನಂತರ ಚಂದ್ರಶೇಖರ್ ಬೇರೆ ಯುವತಿ ಜೊತೆ ಸದಾ ಚಾಟಿಂಗ್ ಮಾಡುತ್ತಿರುವುದನ್ನು ಜಯಶ್ರೀ ಪ್ರಶ್ನಿಸಿದ್ದಾರೆ. ಆ ಬಳಿಕ ಚಂದ್ರಶೇಖರ್ ಜಯಶ್ರೀಗೆ ಕಿರುಕುಳ ನೀಡಲು ಆರಂಭಿಸಿದ್ದ. ಇದರಿಂದ ಬೇಸತ್ತಿದ್ದ ಜಯಶ್ರೀ ಡೆತ್ ನೋಟ್ ಬರೆದಿಟ್ಟು ತವರು ಕೊಂಡಾವಲಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಂದ್ರಶೇಖರ್ ಅವರನ್ನು ಬಂಧಿಸುವವರೆಗೆ ಶವ ಸಂಸ್ಕಾರ ಮಾಡುವುದಿಲ್ಲವೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇವರಿಗೆ ನಾನು ಇಷ್ಟ ಇಲ್ಲವಂತೆ. ಇದು ನನಗೆ ಗೊತ್ತಾಗಿದ್ದು ಮದುವೆ ಬಳಿಕ. ಈ ವಿಷಯ ತಿಳಿದ ಮೇಲೆ ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಮದುವೆ ಆಗುವಾಗ ಇಷ್ಟ ಪಟ್ಟು ಮಾಡಿಕೊಳ್ಳಬೇಕೇ ಹೊರತು ಕಷ್ಟ ಪಟ್ಟು ಅಲ್ಲ. ಸುಮ್ಮನೆ ನಾನು ಅವರಿಬ್ಬರ ಮಧ್ಯ ಯಾಕೆ ಅಡ್ಡ ಬರಬೇಕು. ಯಾವಾಗಲೂ ಇಬ್ಬರೂ ಫೋನ್, ಮೆಸೇಜ್ ಮಾಡುತ್ತಾ ಇರುತ್ತಾರೆ. ಯಾರ ಮೆಸೇಜ್, ಫೋನ್ ಅಂತ ಕೇಳಿದರೆ ಫ್ರೆಂಡ್ ಅಂತ ಹೇಳ್ತಾರೆ. ಎಷ್ಟೇ ಕ್ಲೋಸ್ ಫ್ರೆಂಡ್ ಆದರೂ ಯಾವಾಗಲು ಫೋನ್, ಮೆಸೇಜ್ ಮಾಡೋದು ಏನು ಇರುತ್ತೋ ನನಗೆ ಗೊತ್ತಿಲ್ಲ. ಏನು ಯಾವಾಗಲೂ ಆಕೆ ಜೊತೆ ಮೆಸೇಜ್ ಎಂದು ಕೇಳಿದರೆ ಕೋಪ ಮಾಡಿಕೊಂಡು ನನ್ನ ಜೊತೆ ಸರಿಯಾಗಿ ಮಾತಾಡಲ್ಲ.. ಇವರಿಬ್ಬರ ನಡುವೆ ಇರುವ ಸಂಬಂಧದ ಬಗ್ಗೆ ನಮ್ಮ ತಂದೆ, ತಾಯಿಗೂ ಗೊತ್ತಿಲ್ಲ ಎಂದು ಡೆತ್ ನೋಟ್ನಲ್ಲಿ ಜಯಶ್ರೀ ಬರೆದುಕೊಂಡಿದ್ದಾರೆ.