ಐದು ತಿಂಗಳ ಹಿಂದೆ ಮದುವೆಯಾಗಿರುವ ವ್ಯಕ್ತಿ ಪತ್ನಿಯನ್ನು ಕೊಲೆ ಮಾಡಿ ಶವವನ್ನು ಬೆಡ್ ಕೆಳಗೆ ಅಡಗಿಸಿಟ್ಟು ಪರಾರಿಯಾಗಿರುವ ದಾರುಣ ಘಟನೆಯೊಂದು ಬೆಳಗಾವಿಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ
ನಡೆದಿದೆ.
ಪತ್ನಿ ಸಾಕ್ಷಿ ಕಂಬಾರ (20) ಕೊಲೆಯಾದವರು, ಪತಿ ಆಕಾಶ್ ಕಂಬಾರ ಕೊಲೆ ಆರೋಪಿ. ಮೂರು ದಿನಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿರುವ ಆಕಾಶ್ ಕಂಬಾರ್, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಸಂದರ್ಭದಲ್ಲಿ ಆಕಾಶ್ನ ತಾಯಿ ಊರಿಗೆ ಹೋಗಿದ್ದವರು ಮನೆಗೆ ಬಂದು ಬಾಗಿಲು ತೆಗೆದಾಗ ಸೊಸೆ ಬರ್ಬರವಾಗಿ ಹತ್ಯೆಯಾಗಿರುವುದು ಕಂಡು ಬಂದಿದೆ.
ಕೊಲೆಯಾಗಿರುವ ಸಾಕ್ಷಿಯ ತಂದೆ-ತಾಯಿ, ಆಕಾಶ್ ತಮ್ಮ ಮಗಳಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಮೂಡಲಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಕ್ಷಿ ತನ್ನ ಸ್ನೇಹಿತನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿರುವಾಗ ಆಕಾಶ್ಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಮಾಹಿತಿ ತನಿಖೆ ವೇಳೆ ಲಭಿಸಿದೆ ಎನ್ನಲಾಗಿದೆ.
ಕೊಲೆ ಮಾಡಿದ ಬಳಿಕ ಆಕಾಶ್ ತನ್ನ ತಾಯಿಗೆ ‘ಇನ್ಮುಂದೆ ನಾನು ಮನೆಗೆ ಬರಲ್ಲ’ ಎಂದು ಹೇಳಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಆಕಾಶ್ನ ಕೃತ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.