Menu

ಕಾಂಗ್ರೆಸ್ ಪಕ್ಷದಲ್ಲಿ ಕ್ರಾಂತಿ ಬಗ್ಗೆ ಸಿಎಂ ಆಪ್ತರನ್ನೇ ಕೇಳಿ: ಸಚಿವ ಹೆಚ್‌ಡಿ ಕುಮಾರಸ್ವಾಮಿ

ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆಯೋ ನನಗೆ ಗೊತ್ತಿಲ್ಲ. ಆದರೆ, ಕ್ರಾಂತಿ ಆಗುತ್ತಾ ಅಂತ ಮುಖ್ಯಮಂತ್ರಿಗಳ ಆಪ್ತರೇ ಹೇಳಿದ್ದಾರೆ. ಅದನ್ನಷ್ಟೇ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು,  ಸಚಿವ ಕೆ.ಎನ್.ರಾಜಣ್ಣ ಅವರು ಸೆಪ್ಟೆಂಬರ್ ತಿಂಗಳಲ್ಲಿ ಬದಲಾವಣೆ ಆಗುತ್ತದೆ, ಕ್ರಾಂತಿ ನಡೆಯುತ್ತದೆ ಎಂದು ಹೇಳಿದ್ದಾರೆ. ಅದು ಕ್ರಾಂತಿಯೋ ಏನೋ ನನಗೆ ಗೊತ್ತಿಲ್ಲ. ಅದು ಏನು ಎಂಬುದನ್ನು ರಾಜಣ್ಣ ಅಥವಾ ಸಿಎಂ ಅವರೇ ಹೇಳಬೇಕು. ಅವರ ಪಕ್ಷದ ಬೆಳವಣಿಗೆ ಬಗ್ಗೆ ನನಗೆ ಹೇಗೆ ಗೊತ್ತಾಗಲಿದೆ ಎಂದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಕುಮಾರಸ್ವಾಮಿ ಅವರು, ಇಂಥ ಧಾರುಣ ಘಟನೆ ನಡೆಯಬಾರದಿತ್ತು. ಇದು ರಾಜ್ಯಕ್ಕೆ ಕಪ್ಪುಚುಕ್ಕೆ. ಹುಲಿಗಳ ಯಾವ ಕಾರಣಕ್ಕೆ ಸತ್ತಿವೆ ಎಂಬ ಮಾಹಿತಿ ಇಲ್ಲ. ಈ ಬಗ್ಗೆ ವಿಸ್ತೃತ ತನಿಖೆ ಆಗಿ ಏನಾಗಿದೆ ಎನ್ನುವ ಮಾಹಿತಿ ಹೊರ ಬರಲಿ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಭೇಟಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು; ದೆಹಲಿಯ ನನ್ನ ಮನೆಗೆ ಅಶೋಕ್ ಬಂದಿದ್ದರು. ನಾವು ಅವರು ಅಣ್ಣತಮ್ಮಂದಿರು. ರಾಜಕೀಯವಾಗಿ ಯಾವುದೇ ಚರ್ಚೆಯಾಗಿಲ್ಲ. ದೆಹಲಿಯಲ್ಲಿ ಹೊಸದಾಗಿ ಸರ್ಕಾರಿ ನಿವಾಸಕ್ಕೆ ನಾನು ಸ್ಥಳಾಂತರಗೊಂಡಿ ದ್ದೇನೆ. ಮೊದಲ ಬಾರಿಗೆ ಅವರು ಬಂದಿದ್ದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರ ವಿಷಯ ನನಗೇನೂ ಗೊತ್ತಿಲ್ಲ ಎಂದರು.

ರಾಜ್ಯದ ಜನತೆಗೆ ಹೆಚ್.ಡಿ. ಕುಮಾರಸ್ವಾಮಿ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭ ಕೋರಿದರು. ನಾಡಪ್ರಭುಗಳು ಬೆಂಗಳೂರಿನ ನಿರ್ಮಾತೃ ಮತ್ತು ಅಪ್ರತಿಮ ಆಡಳಿತಗಾರರಷ್ಟೇ ಆಗಿರಲಿಲ್ಲ, ಅವರೊಬ್ಬರು ಅನನ್ಯ ದಾರ್ಶನಿಕರು, ಶಾಂತಿಪ್ರಿಯರು, ಸರ್ವಜನರ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಮಾನವತಾವಾದಿ ಎಂಬುದನ್ನು ಅನುಕ್ಷಣವೂ ಸ್ಮರಿಸೋಣ ಎಂದಿದ್ದಾರೆ.

ಅಭಿವೃದ್ಧಿ, ನೆಮ್ಮದಿ, ಸೌಹಾರ್ದತೆ, ನಗರಾಭಿವೃದ್ಧಿ, ನೀರಾವರಿ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾಡಪ್ರಭುಗಳು ಹಾಕಿಕೊಟ್ಟ ದೂರದೃಷ್ಟಿಯ ಹಾದಿ ನಮಗೆಲ್ಲರಿಗೂ ಮಾದರಿ, ಪ್ರೇರಣೆ.ವಿಜ್ಞಾನ, ತಂತ್ರಜ್ಞಾನ, ಅವಿಷ್ಕಾರ, ಕೈಗಾರಿಕೆ, ಉದ್ಯೋಗಾವಕಾಶ ಸೇರಿ ಅನೇಕ ರೀತಿಯಲ್ಲಿ ಜಗತ್ತಿನ ಮುಂಚೂಣಿ ನಗರವಾಗಿರುವ ಬೆಂಗಳೂರಿನ ಭವ್ಯ ಪರಂಪರೆಯನ್ನು ಮುಂದುವರಿಸೋಣ ಎಂದು ಸಚಿವರು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *