Menu

ಉಕ್ಕಿ ಹರಿಯುತ್ತಿರುವ ಕೃಷ್ಣಾ, ಘಟಪ್ರಭೆ: ತಟದಲ್ಲಿ ಪ್ರವಾಹಭೀತಿ

ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಬೆಳಗಾವಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೃಷ್ಣಾ ಹಾಗೂ ಅದರ ಉಪ ನದಿಗಳು ಮತ್ತು ಘಟಪ್ರಭಾ ನದಿಗಳ ನೀರಿನ ಒಳ ಹರಿವಿನಲ್ಲಿ ತೀವ್ರ ಏರಿಕೆಯಾಗಿ ಪ್ರವಾಹದ ಭೀತಿ ಆವರಿಸಿದೆ.

ಕೃಷ್ಣಾ ನದಿಯ ಒಳ ಹರಿವು 1 ಲಕ್ಷ ಕ್ಯೂಸೆಕ್ ದಾಟಿದೆ. ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ಹಿರಣ್ಯಕೇಶಿ ನದಿ ತುಂಬಿ ತೀರದ ಜಮೀನುಗಳು ಜಲಾವೃತವಾಗಿವೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 11 ಸೇತುವೆಗಳು ಜಲಾವೃತವಾಗಿವೆ. ಹುಕ್ಕೇರಿ ತಾಲೂಕಿನಲ್ಲಿ ಮದಮಕ್ಕನಾಳ – ಯರನಾಳ ಸೇತುವೆ ಜಲಾವೃತವಾಗಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿ ತೀರದ ದತ್ತ ದೇವಸ್ಥಾನ ಜಲಾವೃತ ವಾಗಿದೆ. ಅಪಾಯದ ಮಟ್ಟದಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದು, ಚಿಕ್ಕೋಡಿ ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ನದಿ ತೀರಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಪರಿಶೀಲಿಸಿದ್ದಾರೆ.

ಘಟಪ್ರಭಾ ನದಿಗೆ ತುಂಬಿ ಹರಿಯುತ್ತಿದ್ದು, ಮುಧೋಳ ತಾಲೂಕಿನ ಸೇತುವೆಗಳು ಜಲಾವೃತವಾಗುತ್ತಿವೆ. ಬೆಳಗಾವಿ ಜಿಲ್ಲೆಯಿಂದ ನದಿಗೆ 17 ಸಾವಿರ ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ನಂದಗಾಂವ ಸೇತುವೆ ಜಲಾವೃತವಾಗಿದ್ದು, ಮಿರ್ಜಿ ಬಳಿಯ ಸೇತುವೆ ಜಲಾವೃತವಾಗುವ ಸಾಧ್ಯತೆಯಿದೆ. ಮುಧೋಳ ತಾಲೂಕಿನ 12 ಸೇತುವೆಗಳಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ.

ನದಿಗೆ 25 ಸಾವಿರ ಕ್ಯುಸೆಕ್‌ಗಿಂತ ಹೆಚ್ಚಿನ ನೀರು ಹರಿದುಬಂದರೆ ಎರಡ್ಮೂರು ದಿನಗಳಲ್ಲಿ ಪ್ರವಾಹ ಎದುರಾಗಲಿದೆ. ಮಾಚಕನೂರ, ಮಿರ್ಜಿ, ಚನಾಳ, ಜಾಲಿಬೇರಿ, ಯಡಹಳ್ಳಿ, ಇಂಗಳಗಿ ಗ್ರಾಮ ಗಳು ಮೊದಲ ಹಂತದಲ್ಲಿ ಜಲಾವೃತವಾಗಲಿವೆ. ತಾಲೂಕು ಆಡಳಿತದಿಂದ ನೀರಿನ ಮಟ್ಟದ ಮೇಲೆ ನಿಗಾ ವಹಿಸಲಾಗಿದ್ದು, ಪ್ರವಾಹ ಸ್ಥಿತಿ ಎದುರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

Related Posts

Leave a Reply

Your email address will not be published. Required fields are marked *