ಬೆಂಗಳೂರಿನ ಮಹಿಳೆಯೊಬ್ಬರು ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಚಿನ್ನಾಭರಣ ಕದ್ದು ಜೈಲು ಸೇರಿದ್ದಾರೆ.
ರಾಗಿಗುಡ್ಡದ ನಿವಾಸಿ ಶಾಂತಿ ಅಲಿಯಾಸ್ ಶಾಂತಮ್ಮ ಬಂಧಿತ ಆರೋಪಿಯಾಗಿದ್ದು, ₹14.3 ಲಕ್ಷ ರೂ. ಮೌಲ್ಯದ 143 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಜೆ.ಪಿ.ನಗರದ 2ನೇ ಹಂತದಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಬಗ್ಗೆ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮನೆ ಕೆಲಸದಾಳು ಶಾಂತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.
ಶಿಕ್ಷಕಿ ಆಯೇಷಾ ಮನೆಯಲ್ಲಿ ಶಾಂತಿ ಕೆಲಸಕ್ಕಿದ್ದಳು. ಮನೆಯವರಿಗೆ ಗೊತ್ತಾಗದಂತೆ 4 ಚಿನ್ನದ ಬಳೆಗಳು ಹಾಗೂ ಒಂದು ನೆಕ್ಲೇಸ್ ಕಳವು ಮಾಡಿ ಮಾರಾಟ ಮಾಡಿದ್ದು, ಸಂಬಂಧಿಕರ ಮದುವೆಗೆ ಹೋಗಲು ಆಭರಣ ನೋಡಿದಾಗ ಆಯೇಷಾಗೆ ಕಳವಾಗಿರುವುದು ಗೊತ್ತಾಗಿದೆ. ಮನೆ ಕೆಲಸದ ಶಾಂತಿ ಮೇಲೆ ಅನುಮಾನ ವ್ಯಕ್ತಪಡಿಸಿ ಜೆ.ಪಿ.ನಗರ ಠಾಣೆಗೆ ದೂರು ನೀಡಿದ್ದರು.
ಶಾಂತಿಯನ್ನು ವಶಕ್ಕೆ ಪಡೆದು ಪೊಲೀಸರು ಪ್ರಶ್ನಿಸಿದಾಗ ಕಳ್ಳತನ ಬಯಲಾಗಿದೆ. ತನ್ನ ಮಗಳ ಮದುವೆಗೆ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದೆ. ಈ ಆರ್ಥಿಕ ಸಂಕಷ್ಟದಿಂದ ಸಾಲ ತೀರಿಸಲು ಆಭರಣ ಕಳವು ಮಾಡಿದ್ದಾಗಿ ಆಕೆ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.