ನವದೆಹಲಿ: ನಾಲ್ಕು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಉಪಚುನಾವಣೆಗಳ ಫಲಿತಾಂಶಗಳು ಹೊರಬಿದ್ದಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ಗುಜರಾತ್ ಮತ್ತು ಪಂಜಾಬ್ನಲ್ಲಿ ಯಶಸ್ಸು ಗಳಿಸುವ ಮೂಲಕ ಮತ್ತೆ ಜೀವ ಪಡೆದಿದೆ.
ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿಯು ತಮ್ಮ ಭದ್ರಕೋಟೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಗುಜರಾತ್ನ ಎರಡು ವಿಧಾನಸಭಾ ಕ್ಷೇತ್ರಗಳಾದ ವಿಸಾವದರ್ ಮತ್ತು ಕಾಡಿ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮಿಶ್ರ ಫಲಿತಾಂಶ ಕಂಡುಬಂದಿದೆ.
ವಿಸಾವದರ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದರೆ, ಕಾಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಜಯಗಳಿಸಿದ್ದಾರೆ. ಈ ಮೂಲಕ ಗುಜರಾತ್ನಲ್ಲಿ ಎಎಪಿ ತನ್ನ ಖಾತೆ ತೆರೆದಿದೆ.
ಕೇರಳದಲ್ಲಿ ಕಾಂಗ್ರೆಸ್ಗೆ ಗೆಲುವು
ಕೇರಳದ ನೀಲಂಬೂರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್ಯಾದನ್ ಶೌಕತ್ ಅವರು ಸಿಪಿಐಎಂ ಅಭ್ಯರ್ಥಿ ಎಂ. ಸ್ವರಾಜ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಈ ಗೆಲುವು ಕೇರಳದಲ್ಲಿ ಕಾಂಗ್ರೆಸ್ಗೆ ನೈತಿಕ ಸ್ಥೈರ್ಯ ತುಂಬಿದೆ. ಕಾಂಗ್ರೆಸ್ ಗೆಲ್ಲುತ್ತಿದ್ದಂತೆ ಶೌಕತ್ ಅವರ ಬೆಂಬಲಿಗರು ಪಟಾಕಿ ಹಚ್ಚಿ, ಸಿಹಿ ತಿನಿಸಿ ಸಂಭರಮಿಸಿದರು.
ಪಂಜಾಬಲ್ಲ್ಲೂ ಆಪ್ಗೆ ಜಯ: ಪಂಜಾಬ್ನ ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಸಂಜೀವ್ ಅರೋರಾ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಭರತ್ ಭೂಷಣ್ ಆಶು ಅವರನ್ನು ಸೋಲಿಸಿದ್ದಾರೆ. ಗುಜರಾತ್ನ ನಂತರ ಪಂಜಾಬ್ನಲ್ಲಿಯೂ ಎಎಪಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಟಿಎಂಸಿ ಕೋಟೆ ಭದ್ರ: ಪಶ್ಚಿಮ ಬಂಗಾಳದ ಕಾಳಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಅಲಿಫ್ ಅಹ್ಮದ್ ಅವರು ಗೆಲುವು ದಾಖಲಿಸಿದ್ದಾರೆ.
ಪ್ರತಿಸ್ಪರ್ಧಿ ಬಿಜೆಪಿ ನಾಯಕ ಆಶಿಷ್ ಘೋಷ್ ಅವರನ್ನು ಮಣಿಸಲು ಟಿಎಂಸಿ ನಾಯಕರು ಯಶಸ್ವಿಯಾಗಿದ್ದಾರೆ.
ಈ ರಾಜ್ಯವು ಟಿಎಂಸಿಯ ಭದ್ರಕೋಟೆ ಎಂಬುದು ಈ ಉಪಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಟಿಎಂಸಿ ಗೆಲುವಿನ ನಂತರ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದರು.