ಕೆಲಸಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಇಂಡಿಗೋದ ತರಬೇತಿ ಪೈಲಟ್ ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ.
ತರಬೇತಿ ಪೈಲಟ್ ಮೊದಲು ಬೆಂಗಳೂರಿನಲ್ಲಿ ಇಂಡಿಗೋ ಅಧಿಕಾರಿಗಳಾದ ತಪಸ್ ಡೇ, ಮನೀಶ್ ಸಾಹ್ನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬೆಂಗಳೂರು ಪೊಲೀಸರು ಪ್ರಕರಣವನ್ನು ಇಂಡಿಗೋದ ಪ್ರಧಾನ ಕಚೇರಿ ಇರುವ ಗುರುಗ್ರಾಮ ಪೊಲೀಸರಿಗೆ ವರ್ಗಾಯಿಸಿದ್ದಾರೆ.
ಏಪ್ರಿಲ್ 28 ರಂದು ಇಂಡಿಗೋದ ಗುರುಗ್ರಾಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಡೆದ ಘಟನೆಯನ್ನು ದೂರಿನಲ್ಲಿ ಪೈಲಟ್ ಉಲ್ಲೇಖಿಸಿದ್ದಾರೆ. 30 ನಿಮಿಷಗಳ ಸಭೆಯಲ್ಲಿ, ನಿನಗೆ ವಿಮಾನ ಹಾರಿಸಲು ಬರಲ್ಲ. ಬದಲಾಗಿ ಚಪ್ಪಲಿ ಹೊಲಿಯಲು ನೀನು ಯೋಗ್ಯ ವ್ಯಕ್ತಿ. ಇಲ್ಲಿ ನಿನಗೆ ಕಾವಲುಗಾರನಾಗಲು ಸಹ ಅರ್ಹತೆ ಇಲ್ಲ ಎಂದು ಹೇಳಿ ನಿಂದಿಸಿದ್ದಾಗಿ ಆರೋಪಿಸಿದ್ದಾರೆ.
ನಾನು ಉದ್ಯೋಗಕ್ಕೆ ರಾಜೀನಾಮೆ ನೀಡಬೇಕೆಂಬ ಕಾರಣಕ್ಕೆ ನನಗೆ ಕಿರುಕುಳ ನೀಡಲಾಗಿದೆ, ಪರಿಶಿಷ್ಟ ಜಾತಿಗೆ ಸೇರಿದ ನನ್ನ ಗುರುತನ್ನು ಅವಮಾನಿಸುವ ಉದ್ದೇಶದಿಂದ ಈ ಅವಹೇಳನಕಾರಿ ಹೇಳಿಕೆಗಳನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ದೂರಿದ್ದಾರೆ.
ಸಂಬಳ ಕಡಿತ, ಅನಗತ್ಯ ಎಚ್ಚರಿಕೆ ಪತ್ರಗಳನ್ನು ನೀಡುವ ಮೂಲಕ ನನ್ನನ್ನು ಬಲಿಪಶು ಮಾಡಲಾಗಿದೆ. ನನಗಾದ ಅನ್ಯಾದ ಬಗ್ಗೆ ಉನ್ನತ ಅಧಿಕಾರಿಗಳು ಮತ್ತು ಇಂಡಿಗೋದ ನೈತಿಕ ಸಮಿತಿಗೆ ದೂರು ನೀಡಿದ್ದೆ. ಆದರೆ ಅವರು ಯಾವುದೇ ಕ್ರಮಕೈಗೊಳ್ಳದ ಕಾರಣ ಪೊಲೀಸ್ಗೆ ದೂರು ನೀಡಬೇಕಾಯಿತು ಎಂದು ಹೇಳಿದ್ದಾರೆ.