ಛತ್ತೀಸ್ಗಢದ ಲಾಡ್ಜ್ವೊಂದರಲ್ಲಿ ಅಪ್ರಾಪ್ತ ವಯಸ್ಕ ಗರ್ಭಿಣಿಯೊಬ್ಬಳು ತನ್ನ ಗೆಳೆಯನ ಕತ್ತು ಸೀಳಿ ಹತ್ಯೆ ಮಾಡಿದ್ದಾಳೆ. ರಾಯ್ಪುರ ಪೊಲೀಸರು ಛತ್ತೀಸ್ಗಢ ನಗರದ ಗಂಜ್ ಪೊಲೀಸ್ ಠಾಣೆ ಪ್ರದೇಶದ ಲಾಡ್ಜ್ನಿಂದ ಯುವಕನ ಶವವನ್ನು ವಶಪಡಿಸಿಕೊಂಡಿದ್ದಾರೆ.
ಕೊಲೆಗೈದ ಬಳಿಕ ಬಿಲಾಸ್ಪುರಕ್ಕೆ ಹಿಂತಿರುಗಿದ ಗರ್ಭಿಣಿ ಬಾಲಕಿ ತನ್ನ ತಾಯಿಗೆ ಆಗಿರುವ ಘಟನೆಯನ್ನು ವಿವರಿಸಿ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಬಿಲಾಸ್ಪುರದ ಕೋನಿ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿರುವ ಆರೋಪಿ ಬಾಲಕಿ ಗೆಳೆಯ ಮೊಹಮ್ಮದ್ ಸದ್ದಾಂ ಭೇಟಿಯಾಗಲು ರಾಯ್ಪುರಕ್ಕೆ ಹೋಗಿದ್ದಳು.
ಸದ್ದಾಂ ಬಿಹಾರದ ಅಭನ್ಪುರದಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಬಾಲಕಿ ಮತ್ತು ಆತ ರಾಯ್ಪುರ ರಾಮನ್ ಮಂದಿರ ವಾರ್ಡ್ನ ಸತ್ಕರ್ ಗಲ್ಲಿಯಲ್ಲಿರುವ ಏವನ್ ಲಾಡ್ಜ್ನಲ್ಲಿ ಶನಿವಾರದಿಂದ ವಾಸವಿದ್ದರು. ಗರ್ಭಿಣಿಯಾಗಿರುವ ಅಪ್ರಾಪ್ತ ವಯಸ್ಕ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಸದ್ದಾಂ ಒತ್ತಡ ಹೇರಿದ್ದ, ಇದರಿಂದಾಗಿ ಇಬ್ಬರ ಸಂಬಂಧ ಹಳಸಿತ್ತು ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಲಾಡ್ಜ್ ಹೊರಗೆ ನಡೆದ ವಾಗ್ವಾದದ ಸಂದರ್ಭದಲ್ಲಿ ಸದ್ದಾಂ ಆಕೆಗೆ ಚಾಕು ತೋರಿಸಿ ಬೆದರಿಸಿದ್ದ. ಆದಾದ ನಂತರ ಮತ್ತೊಂದು ರಾತ್ರಿ ಸದ್ದಾಂ ಲಾಡ್ಜ್ ಕೋಣೆಯೊಳಗೆ ಮಲಗಿದ್ದಾಗ ಹುಡುಗಿ ಅದೇ ಚಾಕುವಿನಿಂದ ಅವನ ಕತ್ತು ಸೀಳಿದ್ದಾಳೆ.
ಆಕೆ ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಿ, ಸದ್ದಾಂನ ಮೊಬೈಲ್ ಫೋನ್ ತೆಗೆದುಕೊಂಡು ಪರಾರಿಯಾಗಿದ್ದಳು. ಪೊಲೀಸರ ದಾರಿ ತಪ್ಪಿಸಲು ಲಾಡ್ಜ್ ಕೋಣೆಯ ಕೀಲಿಯನ್ನು ಹತ್ತಿರದ ರೈಲ್ವೆ ಹಳಿ ಮೇಲೆ ಎಸೆದಿದ್ದಳು. ಮರುದಿನ ಬೆಳಗ್ಗೆ ಬಾಲಕಿ ಬಿಲಾಸ್ಪುರಕ್ಕೆ ಹಿಂತಿರುಗಿದ್ದಳು, ಆಕೆಯ ತಾಯಿ ಪ್ರಶ್ನಿಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆಕೆಯ ತಾಯಿ ತಕ್ಷಣ ಆಕೆಯೊಂದಿಗೆ ಕೋನಿ ಪೊಲೀಸ್ ಠಾಣೆಗೆ ಹೋಗಿ ಅಪರಾಧದ ಬಗ್ಗೆ ದೂರು ನೀಡಿದ್ದಾರೆ. ಬಿಹಾರದಲ್ಲಿರುವ ಸದ್ದಾಂ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳಲು ನಿರಾಕರಿಸಿದ್ದಳು.