ಬೆಳಗಾವಿಯ ಮಠವೊಂದರಲ್ಲಿ ಮಹಿಳೆಯ ಜೊತೆ ಖ್ಯಾತ ಸ್ವಾಮೀಜಿಯೊಬ್ಬರು ಸ್ಥಳೀಯ ಯುವಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ರಾತ್ರಿ ಮಠದಲ್ಲಿ ಅನಾಚಾರ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದ್ದು, ಯುವಕರು ಮಠದ ಮೇಲೆ ದಾಳಿ ಮಾಡಿ ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದಲ್ಲಿರುವ ಅಡವಿಸಿದ್ಧೇಶ್ವರ ಮಠದ ಅಡವಿಸಿದ್ಧರಾಮ ಸ್ವಾಮೀಜಿ ಮಠದ ರೂಂನಲ್ಲಿ ಮಹಿಳೆಯ ಜೊತೆ ಇರುವುದನ್ನು ನೋಡಿದ ಯುವಕರು ತಕ್ಷಣವೇ ಊರಿನವರಿಗೆಲ್ಲ ಸುದ್ದಿ ಹರಡಿದ್ದಾರೆ, ನೂರಾರು ಯುವಕರು ಮಠದ ರೂಂನೊಳಗೆ ನುಗ್ಗಿ ಸ್ವಾಮೀಜಿ ಹಾಗೂ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಕ್ಷಣ ಮೂಡಲಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ ಪೊಲೀಸರು ಸ್ವಾಮೀಜಿ ಹಾಗೂ ಗ್ರಾಮಸ್ಥರ ಸಭೆ ನಡೆಸಿದರು.
ಅಡವಿಸಿದ್ಧರಾಮ ಸ್ವಾಮೀಜಿ ಯಾವುದೇ ಕಾರಣಕ್ಕೂ ಮಠದಲ್ಲಿ ಇರಬಾರದು ಎಂದು ಸ್ಥಳೀಯರು ಪಟ್ಟು ಹಿಡಿದರು, ಬಳಿಕ ಅಡವಿಸಿದ್ಧರಾಮ ಸ್ವಾಮೀಜಿ ಮಠಬಿಟ್ಟು ತೆರಳಿದ್ದಾರೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.