ಗುವಾಹಟಿ- ಚೆನ್ನೈ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ವರ್ಶ ಮಾಡಿದೆ. ಗುವಾಹಟಿಯಿಂದ ವಿಮಾನ ಹೊರಟ ಕೆಲ ಹೊತ್ತಿನ ಬಳಿಕ ಪೈಲೆಟ್ ಅಪಾಯದ ಸೂಚನೆ ನೀಡಿದ್ದಾರೆ. ಕಂಟ್ರೋಲ್ ರೂಂ ಅಧಿಕಾರಿಗಳು ವಿಮಾನವನ್ನು ಬೆಂಗಳೂರಿಗೆ ಡೈವರ್ಟ್ ಮಾಡಲು ಸೂಚಿಸಿದಂತೆ ತುರ್ತು ಭೂಸ್ವರ್ಶ ಮಾಡಲಾಗಿದೆ.
168 ಪ್ರಯಾಣಿಕರನ್ನು ಹೊತ್ತಿದ್ದ ಇಂಡಿಗೊ ವಿಮಾನ ಗುವಾಹಟಿಯಿಂದ ಟೇಕಾಫ್ ಆಗಿತ್ತು, ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹಾರಾಟದ ನಡುವೆ ಇಂಧನ ಖಾಲಿ ಸೂಚನೆ ಬರಲು ಆರಂಭಗೊಂಡಿದೆ. ಕಾಕ್ಪಿಟ್ನಲ್ಲಿ ರೆಡ್ ಅಲರ್ಟ್ ಬಂದಿದೆ. ಏರ್ ಕಂಟ್ರೋಲ್ ರೂಂಗೆ ವಿಮಾನದ ಇಂಧನ ಮಾಹಿತಿಯನ್ನು ಪೈಲೆಟ್ ರವಾನಿಸಿದ್ದು, ಕೆಲವೇ ನಿಮಿಷಗಳಷ್ಟು ಮಾತ್ರ ಇಂಧನ ಬಾಕಿ ಇತ್ತು. ಪೈಲೆಟ್ ಆತಂಕಗೊಂಡು ತಕ್ಷಣ ಮೇಡೇ ಸಂದೇಶ ನೀಡಿ ವಿಮಾನವನ್ನು ತಕ್ಷಣವೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನದತ್ತ ಡೈವರ್ಟ್ ಮಾಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುವಷ್ಟು ಇಂಧನ ಇದೆಯಾ ಅನ್ನುವುದು ಕೂಡ ಅನುಮಾನವಾಗಿತ್ತು. ಹತ್ತಿರವಿದ್ದ ನಿಲ್ದಾಣ ಬೆಂಗಳೂರು ಆಗಿದ್ದರಿಂದ ಕಂಟ್ರೋಲ್ ರೂಂನಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಲಿದೆ ಎಂಬ ವಿಷಯ ತಿಳಿದು ನಿಲ್ದಾಣದ ಸಿಬ್ಬಂದಿ, ಕಾರ್ಯಾಚರಣೆ ಪಡೆ, ಅಗ್ನಿಶಾಮಕ ದಳ, ಆ್ಯಂಬುಲೆನ್ಸ್, ರಕ್ಷಣಾ ಪಡೆ ಸಿಬ್ಬಂದಿ ಸಜ್ಜಾಗಿದ್ದರು. ಬೆಂಗಳೂರು ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.