Menu

ಸಾಮಾಜಿಕ-ಶೈಕ್ಷಣಿಕ ಗಣತಿ: ಸಲಹೆಗಳೊಂದಿಗೆ ಎಂಎಲ್ಸಿ ದಿನೇಶ್‌ ಗೂಳಿಗೌಡ ಸಿಎಂಗೆ ಮನವಿ

ರಾಜ್ಯದಲ್ಲಿ ನಡೆಸಲು ಉದ್ದೇಶಿಸಿರುವ ಸಾಮಾಜಿಕ-ಶೈಕ್ಷಣಿಕ ಗಣತಿಯ ನಿಖರತೆ ಹಾಗೂ ತ್ವರಿತ ಪ್ರಕ್ರಿಯೆಗಾಗಿ ರಾಜ್ಯದ 5950 ಗ್ರಾಮ ಪಂಚಾಯ್ತಿಗಳ 92.000 ಸದಸ್ಯರನ್ನು ಮತ್ತು ಗ್ರಾಪಂನ ಬಿಲ್‌ ಕಲೆಕ್ಟರ್‌, ಡಾಟಾ ಎಂಟ್ರಿ ಆಪರೇಟರ್‌ಗಳು, ಕಾರ್ಯದರ್ಶಿಗಳು ಹಾಗೂ ಪಿಡಿಒಗಳನ್ನು ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಹಾಗೂ ಸಾಮಾಜಿಕ ಶೈಕ್ಷಣಿಕ ಗಣತಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ವಿಶೇಷ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡುವ ಬಗ್ಗೆ ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರಕ್ಕೆ ಸಲಹೆಗಳೊಂದಿಗೆ ಮನವಿ ಮಾಡಿದ್ದಾರೆ.

ಕರ್ನಾಟಕದ ಜನತೆಯ ಸಾಮಾಜಿಕ-ಶೈಕ್ಷಣಿಕ ಸ್ಥಾನಮಾನಗಳ ಕುರಿತು ಮರು ಸಮೀಕ್ಷೆ ಮಾಡುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ರಾಜ್ಯದ ಜಾತಿ-ಸಮುದಾಯಗಳ ನಿಜವಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯುವುದು ಈ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ. ಇದರಿಂದ ಮೀಸಲಾತಿ ನೀತಿಗಳನ್ನು ವೈಜ್ಞಾನಿಕವಾಗಿ ಪರಿಷ್ಕರಿಸಲು ಹಾಗೂ ಕಲ್ಯಾಣ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸಹಾಯವಾಗುತ್ತದೆ. ಇದು ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ಈಗ ನಿಗದಿತ ಕಾಲಮಾನದಲ್ಲಿ ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು, ರಾಜ್ಯದಲ್ಲಿರುವ 5950 ಗ್ರಾಮ ಪಂಚಾಯಿತಿಗಳ 92.000 ಸದಸ್ಯರನ್ನು ಸಮೀಕ್ಷೆಯ ಕುರಿತು ಜನರಿಗೆ ಅರಿವು ಮೂಡಿಸಲು ಮತ್ತು ಸಹಕಾರ ಒದಗಿಸಲು ಬಳಸಿಕೊಳ್ಳುವುದು ಸೂಕ್ತವಾಗಿದೆ. ಅವರ ಸ್ಥಳೀಯ ಪರಿಚಯ ಮತ್ತು ಪ್ರಭಾವದಿಂದ ಜನರಲ್ಲಿ ಸಮೀಕ್ಷೆಯ ಬಗ್ಗೆ ವಿಶ್ವಾಸ ಹೆಚ್ಚುತ್ತದೆ. ಇದರ ಜೊತೆಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಕೂಡ ಅಷ್ಟೇ ಪ್ರಮುಖವಾಗಿದೆ. ಹೀಗಾಗಿ ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ವಿಶೇಷ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸಲು ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸ್ಪಷ್ಟ ಸೂಚನೆ ನೀಡಬೇಕಿದೆ. ಇದರಿಂದ ಜನಗಣತಿ ಮಾಹಿತಿ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಲಿದೆ ಎಂದು ಅಭಿಪವ್ರಾಯಪಟ್ಟಿದ್ದಾರೆ.

ಇದೇ ವೇಳೆ, ಗ್ರಾಪಂ ಮಟ್ಟದಲ್ಲಿ 8 ಹಂತದಲ್ಲಿ ಅಧಿಕಾರಿ ವರ್ಗವಿದ್ದು, ಇವರ ಸೇವೆಯನ್ನು ಯಾವ ಯಾವ ಹಂತದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಾವುಗಳು ನಿರ್ಧರಿಸಿ ತೀರ್ಮಾನವನ್ನು ಕೈಗೊಳ್ಳಬಹುದಾಗಿದೆ. ಪ್ರಮುಖವಾಗಿ ಕಾರ್ಯದರ್ಶಿಗಳು, ಪಿಡಿಒಗಳು, ಬಿಲ್ ಕಲೆಕ್ಟರ್‌ಗಳು, ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಸಮೀಕ್ಷಾ ಕಾರ್ಯದಲ್ಲಿ ನೇರವಾಗಿ ತೊಡಗಿಸಿಕೊಳ್ಳಬಹುದಾಗಿದೆ. ಇವರಿಗೆ ಸಾಮಾಜಿಕ-ಶೈಕ್ಷಣಿಕ ಗಣತಿಯ ಪ್ರಕ್ರಿಯೆ, ಮಾಹಿತಿ ಸಂಗ್ರಹಣೆ ಹಾಗೂ ದತ್ತಾಂಶ ನಮೂದಿಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಈ ಸಿಬ್ಬಂದಿಯು ತಮ್ಮ ಕರ್ತವ್ಯದ ಭಾಗವಾಗಿ ತಮ್ಮ ವ್ಯಾಪ್ತಿಯ ಸುಮಾರು 200ರಿಂದ 500 ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ಅಲ್ಲದೆ, ಇವರ ಜತೆ ಆಯಾ ವಾರ್ಡ್‌ ಸದಸ್ಯರೂ ಭೇಟಿ ನೀಡುವಂತೆ ಮಾಡಿದಲ್ಲಿ ಸಮೀಕ್ಷೆಯು ಹೆಚ್ಚು ಪಾರದರ್ಶಕತೆ ಮತ್ತು ನಿಖರ-ವಸ್ತುನಿಷ್ಠ ದತ್ತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಸಮೀಕ್ಷೆ ಯಾವ ರೀತಿ ಇರಬೇಕು, ಯಾವೆಲ್ಲ ಮಾಹಿತಿಗಳನ್ನು ಸಂಗ್ರಹಿಸಬೇಕು ಮತ್ತು ಹೇಗೆ ಮಾಡಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಈ ಗ್ರಾಪಂ ಸಿಬ್ಬಂದಿಗೆ ಸೂಕ್ತ ತರಬೇತಿಯ ಮೂಲಕ ಸ್ಪಷ್ಟಪಡಿಸಬೇಕು. ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಜಾರಿಗೆ ತರುವ ಹೊಣೆಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳಿಗೆ ವಹಿಸಬೇಕು. ಇನ್ನು ಇದಕ್ಕೂ ಮೊದಲು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಮನೆ ಮನೆಯಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಅರಿವು ಮೂಡಿಸಲು ಜಾಹೀರಾತು ನೀಡುವುದು, ಕರಪತ್ರಗಳನ್ನು ಹಂಚುವುದು, ಧ್ವನಿವರ್ಧಕಗಳ ಮೂಲಕ ಮಾಹಿತಿಯನ್ನು ಕೊಟ್ಟು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಾಗಿ ಯಾಗುವುವ ಮಾಡುವ ಮೂಲಕ ಯಶಸ್ವಿಯಾಗಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *