ಪಾಣಿಪತ್: ರೂಪದರ್ಶಿಯ ಕತ್ತು ಸೀಳಿ ಕೊಂದು ಕಾಲುವೆಯಲ್ಲಿ ಬಿಸಾಡಿ ಅಪಘಾತದ ಕತೆ ಕಟ್ಟಿದ್ದ 2 ಮಕ್ಕಳ ತಂದೆಯಾದ ಆಕೆಯ ಪ್ರಿಯಕರನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ರೂಪದರ್ಶಿ ಶೀತಲ್ ಚೌಧರಿಯನ್ನು ಕೊಲೆ ಮಾಡಿರುವುದಾಗಿ ಪ್ರಿಯಕರ ಸುನೀಲ್ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಶನಿವಾರ ರಾತ್ರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೆ ತಿರುಗಿ ಪರಸ್ಪರ ನಿಂದಿಸಿಕೊಂಡಿದ್ದಾರೆ. ಈ ವೇಳೆ ಕೋಪಗೊಂಡ ಸುನೀಲ್ ಪ್ರೇಯಸಿಗೆ ಚಾಕುವಿನಿಂದ ಹಲವಾರು ಬಾರಿ ಇರಿದು ಕೊಲೆ ಮಾಡಿ ಕಾಲುವೆಯಲ್ಲಿ ಬಿಸಾಡಿದ್ದಾನೆ.
ಆರಂಭದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದು, ಆಕೆ ಕೂಡ ಅಪಘಾತದಲ್ಲಿ ಸತ್ತಿದ್ದಾಳೆ ಎಂದು ಬಿಂಬಿಸಲು ಪ್ರಯತ್ನಿಸಿದ. ಆದರೆ ನಂತರ ಪೊಲೀಸರ ವಿಚಾರಣೆಯಲ್ಲಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಪಾಣಿಪತ್ ನ ಆಹಾರ್ ಜಿಲ್ಲೆಯಲ್ಲಿ ಪ್ರೊಮೊ ಶೂಟಿಂಗ್ ಗಾಗಿ ಶೀತಲ್ ಆಗಮಿಸಿದ್ದು, ಆಕೆಯನ್ನು ಭೇಟಿ ಮಾಡಲು ಸುನೀಲ್ ಕಾರಿನಲ್ಲಿ ಬಂದಿದ್ದ. ಇಬ್ಬರು ಮದ್ಯ ಸೇವಿಸಿದ್ದು, ನಂತರ ಇಬ್ಬರ ನಡುವೆ ಮಾತಿನ ಚಕಮಕಿ ಆರಂಗೊಂಡಿದೆ.
ರಾತ್ರಿ 1.30 ರ ಸುಮಾರಿಗೆ ಸೋದರಿ ನೆಹಾಗೆ ವೀಡಿಯೊ ಕಾಲ್ ಮಾಡಿದ ಶೀತಲ್, ಸುನೀಲ್ ತನ್ನ ಮೇಲೆ ಹಲ್ಲೆ ಮಾಡುತ್ತಿರುವುದಾಗಿ ಆರೋಪಿಸಿದ್ದಳು. ಕರೆ ಮಧ್ಯೆಯೇ ಕಟ್ ಆಗಿದ್ದು, ನಂತರ ಫೋನ್ ಸ್ವಿಚ್ ಆಫ್ ಆಗಿತ್ತು.
ಶೀತಲ್ ಕೊಲೆ ಮಾಡಿದ ಸುನೀಲ್ ಕಾರು ಸಮೇತ ಕಾಲುವೆಯಲ್ಲಿ ಶವ ಬಿಸಾಡಿದ್ದ. ಹರಿಯಾಣದ ಪಾಣಿಪತ್ ಪೊಲೀಸರು ಕಾರು ಪತ್ತೆ ಹಚ್ಚಿದರೂ ಕಾರಿನಲ್ಲಿ ಶೀತಲ್ ಶವ ಪತ್ತೆಯಾಗಿರಲಿಲ್ಲ.
ಕಾರು ಕಾಲುವೆಗೆ ಬಿದ್ದಿದ್ದು ಶೀತಲ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ನಾನು ಈಜಿ ಪಾರಾದೆ. ನಂತರ ಬಂದು ಆಸ್ಪತ್ರೆಗೆ ದಾಖಲಾದೆ ಎಂದು ಸುನೀಲ್ ಪೊಲೀಸರಿಗೆ ಹೇಳಿಕೆ ನೀಡಿದ್ದ.
ಎರಡು ದಿನವಾದರೂ ಶೀತಲ್ ಶವ ಪತ್ತೆಯಾಗಿರಲಿಲ್ಲ. ಆದರೆ ಸೋಮವಾರ 80 ಕಿ.ಮೀ. ದೂರದ ಸೋನಿಪೇಟ್ ಬಳಿಯ ಖಾರಖಾಟ್ ಬಳಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೃತಳ ಕೈ ಹಾಗೂ ಎದೆಯ ಮೇಲಿದ್ದ ಟ್ಯಾಟೊದಿಂದ ಗುರುತು ಪತ್ತೆ ಹಚ್ಚಲಾಗಿತ್ತು.