ಆರು ತಿಂಗಳ ಹಿಂದೆ ಕಾಣೆಯಾಗಿದ್ದ ಗದಗದ ಬೆಟಗೇರಿ ಬಡಾವಣೆಯ ಪುಟ್ಟರಾಜನಗರದ ನಿವಾಸಿ ಮಧುಶ್ರೀ ಈರಪ್ಪ ಅಂಗಡಿ (23) ಎಂಬ ಯುವತಿಯನ್ನು ಆಕೆಯ ಪ್ರಿಯಕರನೇ ಕೊಂದು ಜಮೀನಿನಲ್ಲಿ ಹೂತು ಹಾಕಿರುವುದು ಬಹಿರಂಗಗೊಂಡಿದೆ. ಆರೋಪಿ ನಾರಾಯಣಪುರ ನಿವಾಸಿ ಸತೀಶ ಹಿರೇಮಠ ಪೊಲೀಸ್ ಅತಿಥಿಯಾಗಿದ್ದಾನೆ.
ಮಧುಶ್ರೀ ಮತ್ತು ಸತೀಶ ಪ್ರೀತಿಸುತ್ತಿದ್ದರು, ತನ್ನನ್ನು ಮದುವೆ ಆಗು ಎಂದು ಆಕೆ ಒತ್ತಾಯಿಸುತ್ತಿದ್ದಳು. 2024ರ ಡಿ.16ರ ರಾತ್ರಿ ಆಕೆಯನ್ನು ಗದಗ ನಗರದಲ್ಲಿ ಇರುವ ಚಿಕ್ಕಪ್ಪನ ಮನೆಯಿಂದ ಸತೀಶ ಬೈಕ್ನಲ್ಲಿ ನಾರಾಯಣಪುರದ ತನ್ನ ಜಮೀನಿಗೆ ಕರೆದುಕೊಂಡು ಹೋಗಿದ್ದ. ಆಕೆ ತನ್ನನ್ನು ಈಗಲೇ ಮದುವೆ ಆಗುವಂತೆ ಒತ್ತಾಯಿಸಿದ್ದಾಳೆ. ಡಿ.17ರಂದು ಮದುವೆ ವಿಚಾರವಾಗಿ ಜಗಳ ಆಗಿ ಕೋಪಗೊಂಡ ಸತೀಶ, ಮಧುಶ್ರೀ ಧರಿಸಿದ್ದ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ದ್ದಾನೆ. ಬಳಿಕ ಶವವನ್ನು ಜಮೀನಿನ ಬದುವಿನ ಬಳಿ ಮಣ್ಣು ಮಾಡಿದ್ದಾನೆ.
ಜ.12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಗೆ ಗದಗ ಪುಟ್ಟರಾಜನಗರದ ನಿವಾಸಿ ಬಸವರಾಜ ಅಂಗಡಿ ತಮ್ಮ ತಂಗಿ ಮಧುಶ್ರೀ ನಾಪತ್ತೆ ಆಗಿದ್ದಾಳೆ ಎಂದು ದೂರು ನೀಡಿದ್ದರು. ವಿಚಾರಣೆ ನಡೆಸಿದ ಪೊಲೀಸರಿಗೆ ಸತೀಶ, ಆಕೆಯನ್ನು ಹಾತಲಗೇರಿ ಗ್ರಾಮದಲ್ಲಿ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಾನೆ. ಆದರೆ ಪೊಲೀಸರಿಗೆ ಆಕೆಯ ಸುಳಿವು ಸಿಕ್ಕಿಲ್ಲ. ಸತೀಶನ ಮೇಲೆ ಮತ್ತಷ್ಟು ಸಂಶಯಗೊಂಡ ಪೊಲೀಸರು, ಆತ ನೀಡಿದ ಹೇಳಿಕೆಗೂ ಘಟನೆ ನಡೆದ ದಿನ ಆತ ಇದ್ದ ಸ್ಥಳದ ಮೊಬೈಲ್ ಲೊಕೇಶನ್ಗೂ ತಾಳೆ ಆಗದಿರುವುದನ್ನು ಪತ್ತೆ ಹಚ್ಚಿ ಮತ್ತಷ್ಟು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಆಗ ಸತೀಶ ತಾನು ಮಧುಶ್ರೀಯನ್ನು ಕೊಂದು ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ್ರ ತಿಳಿಸಿದ್ದಾರೆ.