ವಂಚಕರ ಗ್ಯಾಂಗ್ವೊಂದು ಮುಳಗುಂದ ಪಟ್ಟಣದ ವೈದ್ಯ ಎಸ್.ಸಿ. ಚವಡಿ ಅವರಿಗೆ ವೀಡಿಯೊ ಕರೆ ಮಾಡಿ ನಿರಂತರ 22 ಗಂಟೆ ವಿಚಾರಣೆಗೆ ಒಳಪಡಿಸಿ ಹಣ ಪಡೆಯಲು ಯತ್ನಿಸಿದ ಬೆಳಕಿಗೆ ಬಂದಿದೆ.
ನ್ಯಾಶನಲ್ ಇನವೆಸ್ಟಿಗೇಶನ್ ಆಥಾರಿಟಿ ಆಫ್ ಇಂಡಿಯಾ ಹೆಸರಲ್ಲಿ ಜೂ.11ರಂದು ಮಧ್ಯಾಹ್ನ ಚವಡಿ ಅವರಿಗೆ ಕರೆ ಮಾಡಿ ನೀವು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೆನರಾ ಬ್ಯಾಂಕ್ನಲ್ಲಿ ಅಪಾರ ಪ್ರಮಾಣದ ಹಣ ದುರ್ಬಳಕೆ ಮಾಡಿದ್ದೀರಿ. ನಿಮ್ಮ ವಿರುದ್ಧ ಮುಂಬೈಯ ಕೊಲೋಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ನಿಮ್ಮನ್ನು ವೀಡಿಯೊ ಕರೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೆದರಿಸಿದ್ದರು.
ನಿಮ್ಮ ಹೆಸರಿನಲ್ಲಿರಬಹುದಾದ ಎಲ್ಲ ಹಣದ ದಾಖಲೆ ಹಾಗೂ ಆಸ್ತಿ ದಾಖಲೆಗಳನ್ನು ತೆಗೆದಿಟ್ಟುಕೊಳ್ಳಿ ಎಂದು ಹೇಳಿ ಮುಳಗುಂದದ ಒಬ್ಬ ಪೊಲೀಸ್ ಸಿಬ್ಬಂದಿ ಹೆಸರು ಹಾಗೂ ಪೋಟೊ ತೋರಿಸಿದ್ದಾರೆ. ವಿಜಯಕುಮಾರ ಎನ್ನುವ ವ್ಯಕ್ತಿಯೊಬ್ಬ ಇನಸ್ಪೆಕ್ಟರ್ ಎಂದು ಹೇಳಿಕೊಂಡು ವಿಚಾರಣೆ ನಡೆಸಿ, ನೀವು ವಯಸ್ಸಾದವರು ನಿಮ್ಮನ್ನು ಇಲ್ಲಿಗೆ ಕರೆಸಿ ವಿಚಾರಣೆ ಮಾಡುವುದು ಅಷ್ಟು ಸರಿ ಇಲ್ಲ. ಹೀಗಾಗಿ ವೀಟಿಯೊ ಕಾಲ್ನಲ್ಲಿ ವಿಚಾರಣೆ ಮಾಡುತ್ತಿದ್ದೇವೆ. ಡಿಸಿಪಿ ನಿಮ್ಮ ಜೊತೆ ವಿಚಾರಣೆ ಮಾಡುವಾಗ ನಯ ವಿನಯದೊಂದಿಗೆ ನಡೆದುಕೊಳ್ಳಿ ಎಂದು ಹೇಳಿದ್ದ.
ನರೇಶ ಗೋಯಲ್ ಹಾಗೂ ಅವರ ಗ್ಯಾಂಗನವರು ನಿಮ್ಮನ್ನು ಹಿಂಬಾಲಿಸುತ್ತಿದ್ದಾರೆ. ನೀವು ಈ ವಿಷಯವನ್ನು ಯಾರಿಗೂ ತಿಳಿಸಬೇಡಿ, ಅವರು ನಿಮ್ಮನ್ನು ಕೊಲೆ ಮಾಡಲು ಹಿಂಬಾಲಿಸುತ್ತಿದ್ದಾರೆ. ನಿಮ್ಮ ಮನೆಯ ಸುತ್ತಮುತ್ತಲು ಇರಬಹುದು ಎಂದು ವಂಚಕರು ಭಯಪಡಿಸಿದ್ದರು. ಮರುದಿನ ಡಿಸಿಪಿ ದಯಾನಾಯಕ ಎಂಬ ಹೆಸರಿನಲ್ಲಿ ವಿಚಾರಣೆ ಮಾಡಲು ಪ್ರಾರಂಭಿಸಿ, ನಾವು ವಿಚಾರಣೆ ಮಾತ್ರ ಮಾಡುತ್ತೇವೆ. ನಂತರ ಸುಪ್ರೀಂ ಕೋರ್ಟಿಗೆ ಪ್ರಕರಣ ದಾಖಲಿಸುತ್ತೇವೆ. ಆಗ ನೀವು ವಕೀಲರನ್ನು ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಡಾ. ಚವಡಿ ಮನೆಯ ರೂಮಿನಲ್ಲಿ ಬಂಧಿಯಾಗಿದ್ದಾರೆ ಎಂಬ ಸುದ್ದಿ ತಿಳಿದು ಊರಿನ ಹಿರಿಯರು ಮನೆಗೆ ಪೊಲೀಸರೊಂದಿಗೆ ಧಾವಿಸಿ ಬಂದು ಬಾಗಿಲು ಮುರಿಯುವ ಪ್ರಯತ್ನ ಮಾಡಿದಾಗ, ಡಾ.ಚವಡಿ ಬಾಗಿಲು ತೆಗೆದರು. ಮುಳಗುಂದ ಸಿಪಿಐ ಸಂಗಮೇಶ ಶಿವಯೋಗಿ ವೀಡಿಯೊ ಕಾಲ್ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ ವಂಚಕರು ಕರೆ ಕಟ್ ಮಾಡಿದ್ದಾರೆ. ಈ ಕುರಿತು ಗದಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ಮುಂದುವರಿದಿದೆ.