ಮಂಗಳೂರು: ಕೋಮು ಹಿಂಸಾಚಾರವನ್ನು ನಿಗ್ರಹಿಸುವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಗುರಿಯೊಂದಿಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ಕಾರ್ಯಪಡೆ (ಎಸ್ಎಎಫ್) ಕಚೇರಿಯನ್ನು ಗೃಹ ಸಚಿವ ಜಿ ಪರಮೇಶ್ವರ ಉದ್ಘಾಟಿಸಿದ್ದಾರೆ.
ಶುಕ್ರವಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉದ್ವಿಗ್ನತೆಗೆ ಕಾರಣವಾದ ಇತ್ತೀಚಿನ ಕೊಲೆ ಸೇರಿದಂತೆ ಜಿಲ್ಲೆಯಲ್ಲಿ ಪದೇ ಪದೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಿಂದಾಗಿ ವಿಶೇಷ ಕಾರ್ಯಪಡೆ ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಕರಾವಳಿ ಪ್ರದೇಶವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಸಾಕ್ಷರರು ಮತ್ತು ಶಾಂತಿಯುತ ಜನಸಂಖ್ಯೆಗೆ ನೆಲೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇದು ‘ದ್ವೇಷ ಮತ್ತು ಕೋಮು ಧ್ರುವೀಕರಣದ ವಾತಾವರಣ’ದಿಂದ ಬಳಲುತ್ತಿದೆ ಎಂದರು.
‘ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರ್ಕಾರದ SAF ಅನ್ನು ರಚನೆ ಮಾಡಿದೆ. ಇದು ಕೋಮು ಭಾಷಣ, ಕೋಮು ಸಂಘರ್ಷ ಸೃಷ್ಟಿಸುವವರನ್ನು ಹತ್ತಿಕ್ಕುವ ದಿಸೆಯಲ್ಲಿ ಈ ಕಾರ್ಯಪಡೆ ಕೆಲಸ ಮಾಡಲಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಮಾಜಿ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಸಲಹೆಗಳನ್ನು ಅನುಸರಿಸಿ, ಪ್ರಸ್ತಾವನೆಯ ಒಂದು ವಾರದೊಳಗೆ ಪಡೆ ರಚಿಸಲಾಗಿದೆ’ ಎಂದು ಹೇಳಿದರು.
ಇಲ್ಲಿನ ನಿವಾಸಿಗಳು ಶಾಂತಿ ಕಾಪಾಡುವಂತೆ ಸಚಿವರು ಒತ್ತಾಯಿಸಿದರು. ಜನರು ಶಾಂತವಾಗಿದ್ದರೆ, ಈ ಪಡೆ ನಿಷ್ಕ್ರಿಯವಾಗಿರುತ್ತದೆ. ಆದರೆ, ಅವರು ಹಾಗೆ ಮಾಡದಿದ್ದರೆ, ಅದು ಕಾರ್ಯನಿರ್ವಹಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.
ನಕ್ಸಲ್ ವಿರೋಧಿ ಘಟಕಗಳಿಂದ ಸಿಬ್ಬಂದಿಯನ್ನು ಎಸ್ಎಎಫ್ ರಚಿಸಲು ಮರು ನಿಯೋಜಿಸಲಾಗಿದ್ದು, ಅಗತ್ಯವಿದ್ದರೆ ಉಡುಪಿ ಮತ್ತು ಶಿವಮೊಗ್ಗದಂತಹ ಇತರ ಸೂಕ್ಷ್ಮ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಎಸ್ಎಎಫ್ ರಚನೆಯು ದ್ವೇಷ ಮತ್ತು ಹಿಂಸಾಚಾರದ ಮೂಲ ಕಾರಣಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಾಯಕ ಹೆಜ್ಜೆಯಾಗಿದೆ. ಪ್ರಗತಿಪರವಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಏಕೈಕ ಕರಾಳ ವಿಚಾರವೆಂದರೆ ಕೋಮು ಉದ್ವಿಗ್ನತೆ. ಈ ಸಮಯದಲ್ಲಿ ಇದನ್ನು ತೊಡೆದಾಕುವ ಅಗತ್ಯವಿದೆ ಎಂದು ಹೇಳಿದರು.
SAF ರಾಜಕೀಯ ಪ್ರೇರಿತವಾಗಿಲ್ಲ ಮತ್ತು ಸಾಮರಸ್ಯವನ್ನು ಕಾಪಾಡುವ ಗುರಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಶಾಂತಿ ಸಭೆಗಳನ್ನು ನಡೆಸುವ ಯೋಜನೆಗಳು ನಡೆಯುತ್ತಿವೆ ಎಂದು ರಾವ್ ಹೇಳಿದರು.